Connect with us

Dvgsuddi Kannada | online news portal | Kannada news online

ದಾವಣಗೆರೆ; ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು ಜನತಾ ದರ್ಶನ: ಭದ್ರಾ ನಾಲೆಯ ಕೊನೆ ಭಾಗದ 5 ಕೆರೆಗಳಿಗೆ ನೀರು ತುಂಬಿಸಲು ಯೋಜನೆ; ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ

IMG 20230925 194843

ಪ್ರಮುಖ ಸುದ್ದಿ

ದಾವಣಗೆರೆ; ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು ಜನತಾ ದರ್ಶನ: ಭದ್ರಾ ನಾಲೆಯ ಕೊನೆ ಭಾಗದ 5 ಕೆರೆಗಳಿಗೆ ನೀರು ತುಂಬಿಸಲು ಯೋಜನೆ; ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ಜನತಾ ದರ್ಶನ ಕಾರ್ಯಕ್ರಮಗಳನ್ನು ಪ್ರತಿ 15 ದಿನಗಳಿಗೊಮ್ಮೆ ಏರ್ಪಡಿಸುವುದರಿಂದ ಜನರ ಕುಂದುಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಿದ್ದು ಜನರ ಬಳಿಗೆ ಆಡಳಿತ ಕೊಂಡೊಯ್ಯುವ ಪರಿ ಇದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ಜಿಲ್ಲೆಯ ಕಡಲೆಬಾಳು ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಸರ್ಕಾರದ ಸೌಲಭ್ಯಗಳಿಗಾಗಿ ಕಚೇರಿ ಅಲೆಯುವುದನ್ನು ತಪ್ಪಿಸಬೇಕೆಂದು ಮತ್ತು ಸಣ್ಣ, ಸಣ್ಣ ಸಮಸ್ಯೆಗೂ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಅಲೆಯಬೇಕಾದ ಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಖ್ಯ ಮಂತ್ರಿಗಳು ಜನತಾ ದರ್ಶನ ನಡೆಸಿ ಸಮಸ್ಯೆ ಸ್ಥಳದಲ್ಲಿಯೇ ಬಗೆಹರಿಸಲು ಸೂಚನೆ ನೀಡಿದ್ದಾರೆ ಎಂದರು.

ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸುವುದರಿಂದ ಜನರ ಸಮಯ, ಖರ್ಚು ಉಳಿತಾಯವಾಗಿ ವಿಶ್ವಾಸ ಮೂಡುತ್ತದೆ. ಕಡೆಲೆಬಾಳು ಗ್ರಾಮದಲ್ಲಿ ನಡೆದ ಜನತಾ ದರ್ಶನಕ್ಕೂ ಮುಂಚಿತವಾಗಿ ಪ್ರತಿ ಮನೆಗೂ ಭೇಟಿ ನೀಡಿ ಎಲ್ಲರ ಕುಂದುಕೊರತೆಗಳನ್ನು ಆಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಶೌಚಾಲಯ ಇಲ್ಲದ 150 ಅರ್ಜಿ ಹಾಗೂ ಇ-ಸ್ವತ್ತಿನ ಸಮಸ್ಯೆ ಬಗ್ಗೆ 425 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ತಕರಾರು ಇದ್ದ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಎಲ್ಲ ಮನೆಯಲ್ಲಿಯು ಶೌಚಾಲಯ ನಿರ್ಮಾಣ ಮಾಡಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳಬೇಕಾಗಿದ್ದು ಒಳಚರಂಡಿ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಬೇತೂರು ಗ್ರಾಮದಲ್ಲಿ ಈ ಹಿಂದೆ ಪೈಪ್‍ಲೈನ್ ಮಾಡುವ ಮೂಲಕ ಶೌಚಾಲಯದ ಸಂಪರ್ಕವನ್ನು ಪ್ರತಿ ಮನೆಯಿಂದ ಕಲ್ಪಿಸಲಾಗಿತ್ತು, ಇದೇ ಮಾದರಿಯಲ್ಲಿ ಕಡಲೆಬಾಳು ಸೇರಿದಂತೆ ಎಲ್ಲೆಲ್ಲಿ ಬೇಡಿಕೆ ಹೆಚ್ಚಿದೆ, ಅಂತಹ ಗ್ರಾಮಗಳಲ್ಲಿ ಯುಜಿಡಿ ಪೈಪ್‍ಲೈನ್ ಮಾಡಲು ಯೋಜಿಸಲಾಗಿದ್ದು ಇದು ಗ್ರಾಮಾಂತರ ಪ್ರದೇಶದ ಮಾದರಿ ಯೋಜನೆಯಾಗಲಿದೆ ಎಂದು ತಿಳಿಸಿದರು.

ಸರ್ವೆ ದೂರುಬಾರದಂತೆ ಕೆಲಸ ನಿರ್ವಹಿಸಲು ಸೂಚನೆ; ಅಮೃತ ನಗರ ಅನೇಕ ವರ್ಷಗಳಿಂದ ಸರ್ವೆಯಾಗದೇ ಸಮಸ್ಯೆಯಾಗಿ ಉಳಿದಿದ್ದು ಹಕ್ಕುಪತ್ರಗಳನ್ನು ಹಂಚಿಕೆ ಮಾಡಲು ಸಾಧ್ಯವಾಗಿಲ್ಲ, ಇಲ್ಲಿ ಒಂದೆರಡು ಸರ್ವೆ ನಂಬರ್ ಸಮಸ್ಯೆ ಇದ್ದು ಕೆಲವೇ ದಿನಗಳಲ್ಲಿ ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುತ್ತದೆಯಲ್ಲದೆ ಕಂದಾಯ ಗ್ರಾಮವನ್ನಾಗಿಸಲು ಕ್ರಮ ವಹಿಸಲಾಗುತ್ತದೆ. ಅದೇ ರೀತಿ ಮಾಗನಹಳ್ಳಿ ಕಂದಾಯ ಗ್ರಾಮವಾಗಲಿದೆ. ಭೂ ಮಾಪನ ಇಲಾಖೆ ಉಪನಿರ್ದೇಶಕರು ಮೋಜಣಿ ಪೋಡಿ, ಹದ್ದುಬಸ್ತ್, 11ಇ ಸ್ಕೆಚ್, ಇ-ಸ್ವತ್ತು ಇದರಲ್ಲಿ ಯಾವುದೇ ದೂರುಗಳು ಬಾರದಂತೆ ಜನರ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಉದ್ಯೋಗ ಮೇಳ; ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮತ್ತು ಸರ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿ ಯುವ ಜನರು ಉದ್ಯೋಗದಲ್ಲಿ ತೊಡಗಲು ಉದ್ಯೋಗ ಮೇಳಗಳನ್ನು ಕ್ಯಾಂಪಸ್ ಆಯ್ಕೆ, ಮೇಳಗಳನ್ನು ಆಯೋಜನೆ ಮಾಡುವ ಮೂಲಕ ಜಿಲ್ಲೆಯ ಯುವಕರನ್ನು ಉದ್ಯೋಗಿಗಳನ್ನಾಗಿಸಿ ಅವರಿಗೆ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಜಿಲ್ಲಾ ಆಡಳಿತದೊಂದಿಗೆ ಮಾಡಲಾಗುತ್ತದೆ, ಸಾವಿರಾರು ಯುವ ಜನರು ಹೊಸ ಹೊಸ ಉದ್ಯೋಗಕ್ಕೆ ತೆರಳಿದಲ್ಲಿ ಜಿಲ್ಲೆಯ ಜನರ ಆರ್ಥಿಕ ಸ್ಥತಿಗತಿ ಸುಧಾರಣೆಯಾಗುತ್ತದೆ ಎಂದರು.

ಯೋಜನೆ ತಲುಪಿಸಿ ಮಾದರಿಯಾಗಿ; ರೈತರು ಕೃಷಿಯೊಂದಿಗೆ ಹೈನುಗಾರಿಕೆ ಕೈಗೊಳ್ಳುವುದರಿಂದ ಸುಸ್ಥಿರ ಅಭಿವೃದ್ದಿಯಾಗಲಿದೆ. ಕೃಷಿ ಇಲಾಖೆಯಿಂದ ರೈತರಿಗೆ ಪಶು ಸಾಕಾಣಿಕೆಗಾಗಿ ರೂ.40 ಸಾವಿರ ಸಹಾಯಧನ ನೀಡಲಾಗುತ್ತದೆ. ಈಗಾಗಲೇ ತಮಿಳುನಾಡಿನಿಂದ ಹಸುಗಳನ್ನು ಖರೀದಿಸಿ ನೀಡಲಾಗುತ್ತಿದೆ. ಇದರೊಂದಿಗೆ ಡಿಸಿಸಿ ಬ್ಯಾಂಕ್‍ನಿಂದ ಸಾಲದ ರೂಪದಲ್ಲಿ ಇನ್ನಷ್ಟು ಹಣ ನೀಡಿದಲ್ಲಿ ಗುಜರಾತ್‍ನಿಂದ ಇನ್ನೂ ಅತ್ಯುತ್ತಮ ತಳಿಗಳ ಎಮ್ಮೆ, ಹಸುಗಳನ್ನು ಖರೀದಿಸುವುದರಿಂದ ಹಾಲು ಹೆಚ್ಚು ಮತ್ತು ದೀರ್ಘಾವಧಿಯವರೆಗೆ ಕೊಡುತ್ತವೆ. ಜಿಲ್ಲಾ ಸಹಕಾರ ಬ್ಯಾಂಕ್‍ನವರು ಈ ನಿಟ್ಟಿನಲ್ಲಿ ರೈತರಿಗೆ ಸಹಾಯ ಮಾಡಬೇಕೆಂದರು.

5 ಕೆರೆಗಳಿಗೆ ನೀರು; ಕಡಲೆಬಾಳು ಗ್ರಾಮವು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗವಾಗಿದ್ದರಿಂದ ಇಲ್ಲಿ ನೀರಿನ ಸಮಸ್ಯೆ ಹೆಚ್ಚು ಇದೆ. ಇದಕ್ಕಾಗಿಯೇ ಈ ಹಿಂದೆ 5 ಕೆರೆಗಳಿಗೆ ನೀರು ತುಂಬಿಸಲು 135 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು, ಆದರೆ ಕಾರಣಾಂತರಿಂದ ನಿಂತು ಹೋಗಿದೆ. ಇದನ್ನು ಅನುಷ್ಟಾನ ಮಾಡಿ ಈ ಭಾಗದ ರೈತರ ಸಮಸ್ಯೆ ನೀಗಲು ಕ್ರಮ ವಹಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಮಾತನಾಡಿ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲು ಮತ್ತು ಜನರ ಮನೆಬಾಗಿಲಿಗೆ ಆಡಳಿತ ಕೊಂಡೊಯ್ದು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದರಲ್ಲಿ 850 ಕ್ಕಿಂತಲೂ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿವೆ. ಈ ಎಲ್ಲಾ ಅರ್ಜಿಗಳನ್ನು ಐಪಿಜಿಆರ್‍ಎಸ್ ಸಿಸ್ಟಂನಲ್ಲಿ ದಾಖಲಿಸಿ ಜನರಿಗೆ ಅವರ ಅರ್ಜಿ ಸ್ಥಿತಿಗತಿ ಮಾಹಿತಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಜನತಾ ದರ್ಶನ ಅಂಗವಾಗಿ 25 ಕ್ಕೂ ಹೆಚ್ಚು ಭೂ ಮಾಪಕರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರ್ವೆ ಕಾರ್ಯ ಕೈಗೊಂಡು ಪಹಣಿ ತಿದ್ದುಪಡಿ, ಸರ್ವೆ ದಾಖಲೆ ತಿದ್ದುಪಡಿ ಕಾರ್ಯವನ್ನು ಏಕಕಾಲದಲ್ಲಿ ಮಾಡಲಾಗಿದೆ. ಇಂದು ನೊಂದವರಿಗೆ ಜನತಾ ದರ್ಶನ ಆಶಾಕಿರಣವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಕಡಲೆಬಾಳು ಗ್ರಾಮದಲ್ಲಿ ಇ-ಸ್ವತ್ತಿನ 400 ಅರ್ಜಿಗಳು ಸ್ವೀಕೃತವಾಗಿದ್ದು ಜಿಲ್ಲೆಯಲ್ಲಿನ ಇ-ಸ್ವತ್ತಿನ ಸಮಸ್ಯೆಯನ್ನು ಬಗೆಹರಿಸಲು ಕ್ರಿಯಾ ಯೋಜನೆ ರೂಪಿಸಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಲ್ಲಿಕೆಯಾದ ಅರ್ಜಿಗಳಲ್ಲಿ ಸರ್ವೆ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ, ವಸತಿ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಿತ್ತು.
ವಸ್ತುಪ್ರದರ್ಶನ ಮತ್ತು ಆರೋಗ್ಯ ಮೇಳ; ಜನತಾ ದರ್ಶನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೋಷಣ್ ಅಭಿಯಾನ, ಎನ್.ಆರ್.ಎಲ್.ಎಂ. ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ, ತೋಟಗಾರಿಕೆ, ಕೃಷಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್, ಸಹಕಾರ ಸೊಸೈಟಿಯ ಸತ್ಯಬಾಬು, ಮುಖಂಡರಾದ ರಾಘವೇಂದ್ರ, ಗಿರೀಶ್, ಬೇತೂರು ಕರಿಬಸಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ದುರ್ಗಶ್ರೀ ಸ್ವಾಗತಿಸಿದರು.

ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top