ದಾವಣಗೆರೆ: ಪ್ರಸಕ್ತ ಸಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯಕ್ರಮ, ಯೋಜನೆಗಳ ಕುರಿತು ಜಾನಪದ ಕಲಾ ತಂಡಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾನಪದ ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಏನು..?
ಅರ್ಜಿ ಸಲ್ಲಿಸುವ ತಂಡಗಳು ಸಾಂಗ್ ಮತ್ತು ಡ್ರಾಮಾ ಡಿವಿಜನ್ ವಿಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತರೆ ವಿವಿಧ ಸರ್ಕಾರಿ ಇಲಾಖೆಯಲ್ಲಿ ಭಾಗವಹಿಸಿ ಗುರುತಿಸಲ್ಪಟ್ಟಿದ್ದು, ಜಿಲ್ಲಾ ನೋಂದಣಿ ಇಲಾಖೆಯಲ್ಲಿ ನೋಂದಾಯಿತ ಸಂಸ್ಥೆಯಾಗಿರಬೇಕು. ಕಲಾ ತಂಡದಲ್ಲಿ ಕನಿಷ್ಠ 06 ರಿಂದ 08 ಜನ ಕಲಾವಿದರು ಇರಬೇಕು. ಈ ಪೈಕಿ ಇಬ್ಬರು ಮಹಿಳಾ ಕಲಾವಿದರು, ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರನ್ನೊಳಗೊಂಡಿರಬೇಕು. ಸಂಗೀತ ಸಲಕರಣೆಗಳನ್ನು ಹಾಗೂ ಸಮವಸ್ತ್ರ ಹೊಂದಿರಬೇಕು.
ಆಸಕ್ತ ಅರ್ಹ ಜಾನಪದ ಬೀದಿ ನಾಟಕ ಕಲಾತಂಡಗಳು ತಮ್ಮ ತಂಡದ ಸಂಪೂರ್ಣ ವಿವರ, ಕಲಾವಿದರ ವಿವರ, ಅನುಭವದ ದಾಖಲೆಗಳ ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಸೆಪ್ಟೆಂಬರ್ 9 ರೊಳಗಾಗಿ ಸಲ್ಲಿಸಬೇಕು. ತಂಡಗಳಿಗೆ ಆಯ್ಕೆ ಮಾಡುವ ದಿನಾಂಕವನ್ನು ನಂತರ ತಿಳಿಸಲಾಗುವುದು. ಅರ್ಜಿ ಸಲ್ಲಿಸಿದ ಕಲಾ ತಂಡಗಳು ತಮ್ಮ ಸ್ವಂತ ಖರ್ಚಿನಲ್ಲಿ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು.
ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಕಲಾ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಜಾನಪದ ಬೀದಿನಾಟಕ ಕಲಾ ತಂಡಗಳು, ಕಚೇರಿಯ ಸಮಯದಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ಐ.ಇ.ಸಿ.ವಿಭಾಗ ರೂ.ನಂ:03 ಪಡೆದು ಸಲ್ಲಿಸಬಹುದಾಗಿದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.



