ದಾವಣಗೆರೆ: ವಸತಿ ಶಾಲೆಗೆ ಹೋಗಲು ಇಷ್ಟ ಇಲ್ಲದಿದ್ರೂ, ಪೋಷಕರು ಒತ್ತಾಯದಿಂದ ಸೇರಿಸಿದಕ್ಕೆ ಬಾಲಕ ಶಾಲೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ನಡೆದಿದೆ.
ಜಗಳೂರು ತಾಲೂಕಿನ ಮೆದಗಿನಕೆರೆ ವಸತಿ ಶಾಲೆಯ 6ನೇ ತರಗತಿ ಎಸ್.ಸುನೀಲ್(12) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಿನ್ನೆ(ಆ.23) ರಾತ್ರಿ ಶಾಲೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಲ್ಲೂಕಿನ ಸಾಗಲಗಟ್ಟೆ ಗ್ರಾಮದ ಸುರೇಶ್ ಹಾಗೂ ಕವಿತಾ ಅವರ ಪುತ್ರ ಸುನೀಲ್. ಅನಾರೋಗ್ಯದ ಕಾರಣದಿಂದ ಒಂದು ವಾರದ ಹಿಂದೆ ಪೋಷಕರು ಸುನೀಲ್ ನನ್ನು ಸಾಗಲಕಟ್ಟೆ ಗ್ರಾಮಕ್ಕೆ ಕರೆದೊಯ್ದಿದ್ದರು. ಚೇತರಿಸಿಕೊಂಡ ಬಳಿಕ ಪೋಷಕರು ವಿದ್ಯಾರ್ಥಿಯನ್ನು ಸೋಮವಾರ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು.
ಮಂಗಳವಾರ ಸಂಜೆ ಪೋಷಕರಿಗೆ ಕರೆ ಮಾಡಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದ. ನಾಳೆ ಬರುತ್ತೇನೆ ಎಂದು ಪೋಷಕರು ಹೇಳಿದ್ದಾರೆ. ಆದರೆ ಪೋಷಕರು ಬಾರದೇ ಇದ್ದುದ್ದರಿಂದ ಮನನೊಂದು ಶೌಚಾಲಯಕ್ಕೆ ತೆರಳಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಾಂಶುಪಾಲರಾದ ಜಿ.ಎನ್. ರೂಪಕಲಾ ಅವರು ಶೌಚಾಲಯದಲ್ಲಿ ನೇಣು ಹಾಕಿಕೊಂಡು ನರಳುತ್ತಿದ್ದ ವಿದ್ಯಾರ್ಥಿಯನ್ನು ತಮ್ಮ ಕಾರಿನಲ್ಲಿ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್.ಪಿ. ರಿಷ್ಯಂತ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಿ.ರೇಷ್ಮಾಕೌಸರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಸಿಪಿಐ ಸತ್ಯನಾರಾಯಣ, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಜಗಳೂರು ಪಿಎಸ್ಐ ಮಹೇಶ ಹೊಸಪೇಟೆ, ಪ್ರಾಂಶುಪಾಲರಾದ ರೂಪಕಲಾ ಉಪಸ್ಥಿತರಿದ್ದರು.



