ದಾವಣಗೆರೆ: ನಕಲಿ 15 ಕೂದಲು ಕಸಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅನಧಿಕೃತ ಕೇಂದ್ರಗಳಿಗೆ ಬೀಗ ಜಡಿದಿದ್ದಾರೆ. ಈ ವೇಳೆ ಉಪಕರಣ ವಶಕ್ಕೆ ಪಡೆದು, ಕೇಸ್ ದಾಖಲಿಸಿ ನೋಟಿಸ್ ಜಾರಿ ಮಾಡಿದ್ದಾರೆ.
12 ಕಡೆ ಏಕಕಾಲದಲ್ಲಿ ದಾಳಿ
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಭಾರತೀಯ ಚರ್ಮರೋಗ, ರತಿರೋಗ ಹಾಗೂ ಕುಷ್ಠರೋಗ ತಜ್ಞರ ಸಂಘ ನೀಡಿದ ದೂರು ಆಧರಿಸಿ ಈ ದಾಳಿ ನಡೆದಿದೆ. ಈಗಾಗಲೇ 3 ಕ್ಲಿನಿಕ್ಗಳು ಬಾಗಿಲು ಮುಚ್ಚಿದ್ದು, ಪರವಾನಗಿ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದ ಉಳಿದ 12 ಕಡೆ ಏಕಕಾಲದಲ್ಲಿ ದಾಳಿ ನಡೆದಿದೆ.
15 ತಂಡಗಳಿಂದ ದಾಳಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 15 ತಂಡ ಈ ದಾಳಿಯಲ್ಲಿ ಭಾಗಿಯಾಗಿವೆ. ಶಾಮನೂರು ರಸ್ತೆ, ರಾಮ್ ಅಂಡ್ ಕೊ ವೃತ್ತ, ಎಂಸಿಸಿ ಬಡಾವಣೆ, ಜೀವನ್ ಭೀಮಾ ನಗರ, ಪಿ.ಜೆ. ಬಡಾವಣೆ, ಕುವೆಂಪು ನಗರ, ವಿದ್ಯಾನಗರ, ದೇವರಾಜ ಅರಸು ಬಡಾವಣೆ ಸೇರಿ ನಗರದ ವಿವಿಧೆಡೆ ದಾಳಿ ನಡೆದಿದೆ.
ವೈದ್ಯಕೀಯ ಚಿಕಿತ್ಸೆ ನೀಡುವ ಸಂಸ್ಥೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಪರವಾನಗಿ ಪಡೆಯುವುದು ಕಡ್ಡಾಯ. ದಾಳಿಯ ವೇಳೆ ಅಗತ್ಯ ದಾಖಲೆನೀಡದ ಕ್ಲಿನಿಕ್ಗಳ ಬಾಗಿಲು ಮುಚ್ಚಿಸಲಾಗಿದೆ. ಈ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಷಣ್ಮುಖಪ್ಪ ಮಾಹಿತಿ ನೀಡಿದ್ದಾರೆ.
ದಾಳಿಯ ಹೈಲೈಟ್ಸ್
- ಅನಧಿಕೃತ ಕೇಂದ್ರಗಳಿಗೆ ನೋಟಿಸ್ ಜಾರಿ
- ಚಿಕಿತ್ಸೆಗೆ ಕನಿಷ್ಠ 50,000ದಿಂದ 1 ಲಕ್ಷದವರೆಗೆ ದರ ನಿಗದಿ
- ಬಹುತೇಕ ಕೇಶ ಕಸಿ ಕ್ಲಿನಿಕ್ಗಳಲ್ಲಿ ಚರ್ಮರೋಗ ತಜ್ಞರೇ ಇಲ್ಲ
- ಕೇರಳದಲ್ಲಿ ಕೇಂದ್ರ ಕಚೇರಿ ಹೊಂದಿ ಕೆಪಿಎಂಇ ಕಾಯ್ದೆಯಡಿ ಪರವಾನಗಿ ಪಡೆದಿಲ್ಲ
- ಮೈಸೂರು ಬೆಂಗಳೂರು ಹುಬ್ಬಳ್ಳಿ ಸೇರಿ ಹಲವೆಡೆ ಚಿಕಿತ್ಸಾ ಕೇಂದ್ರಗಳಿವೆ
- ಬಿಎಎಂಎಸ್ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿಯೇ ಕೇಶ ಕಸಿ ಮಾಡುವುದು ದಾಳಿ ವೇಳೆ ಪತ್ತೆ
- ವೈದ್ಯರ ವಿವರ ಚಿಕಿತ್ಸೆ ಹಾಗೂ ದರದ ಮಾಹಿತಿ ಪ್ರದರ್ಶಿಸಿಲ್ಲ
ಎಂಬಿಬಿಎಸ್ ವೈದ್ಯರ ಅನುಪಸ್ಥಿತಿಯಲ್ಲಿ ಅರಿವಳಿಕೆ ನೀಡುತ್ತಿದ್ದಾರೆ. ತಲೆ, ಮುಖಕ್ಕೆ ನೀಡುವ ಈ ಚಿಕಿತ್ಸೆಯಿಂದ ಮಿದುಳಿಗೆ ತೊಂದರೆ ಉಂಟಾಗುವ ಅಪಾಯವಿದೆ.
-ಡಾ.ಜಿ.ಡಿ. ರಾಘವನ್ , ಜಿಲ್ಲಾ ಸರ್ವೇಕ್ಷಣಾಧಿಕಾರಿ
ಚರ್ಮರೋಗ ತಜ್ಞ ಅಥವಾ ಪ್ಲಾಸ್ಟಿಕ್ ಸರ್ಜನ್ ಅಲ್ಲದವರು ಕೇಶ ಕಸಿ ಚಿಕಿತ್ಸೆ ನೀಡಲು ಕೆಪಿಎಂಇ ಕಾಯ್ದೆಯಲ್ಲಿ ಅವಕಾಶವಿಲ್ಲ. ಅನಧಿಕೃತ ಕ್ಲಿನಿಕ್ನಲ್ಲಿ ಅನೇಕರು ಸಾಕಷ್ಟು ತೊಂದರೆ ಅನುಭವಿಸಿದ್ದು ಗಮನಕ್ಕೆ ಬಂದಿತ್ತು. ಕೆಲವರು ಅಧಿಕೃತವಾಗಿ ದೂರು ನೀಡಿದ್ದರು.
– ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್. ಷಣ್ಮುಖಪ್ಪ ತಿಳಿಸಿದರು.



