ದಾವಣಗೆರೆ: ದಾವಣಗೆರೆ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿನ್ನೆ (ಜೂ.13) 25 ನಿಮಿಷ ರಹಸ್ಯ ಸಭೆ ನಡೆಸಿದ್ದರು. ಬಸವರಾಜ ಬೊಮ್ಮಾಯಿ ತಂಗಿದ್ದ ರೆಸಾರ್ಟ್ಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿದ್ದರು. ಈ ಇಬ್ಬರು ರಾಜಕೀಯ ನಾಯಕರ ಭೇಟಿ, ಹೊಂದಾಣಿಕೆ ರಾಜಕಾರಣ ಬಗ್ಗೆ ಬಿಜೆಪಿ ನಾಯಕರ ಆರೋಪ ಹಿನ್ನೆಲೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು.
ಈ ಬಗ್ಗೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಶಾಮನೂರು ಶಿವಶಂಕರಪ್ಪ, ಬಸವರಾಜ ಬೊಮ್ಮಾಯಿ ನಮ್ಮ ಸಂಬಂಧಿಕರು. ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ. ನಾನು ಚುನಾವಣೆಯಲ್ಲಿ ಗೆದ್ದಿದ್ದೀನಿ. ಅವರು ಗೆದ್ದಿದ್ದಾರೆ. ಹೀಗಾಗಿ ಭೇಟಿಯಾಗಿದ್ದೇವೆ. ನಮ್ಮ ಭೇಟಿ ರಾಜಕೀಯ ಪ್ರೇರಿತ ಭೇಟಿವಲ್ಲ. ಭೇಟಿಯಲ್ಲಿ ಚರ್ಚೆಯಾದ ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಅವರು ಬಿಜೆಪಿಯವರು ನಾವು ಕಾಂಗ್ರೆಸ್ ನವರು. ನಮ್ಮಲ್ಲಿ ಯಾವ ರಾಜಕೀಯ ಮಾತುಕತೆ ಇರುತ್ತದೆ. ನಾವು ಹೊಂದಾಣಿಕೆ ರಾಜಕಾರಣ ಮಾಡಲು ಚುನಾವಣೆ ಪೂರ್ವವಾಗಿ ಭೇಟಿಯಾಗಿಲ್ಲ, ಚುನಾವಣೆ ನಂತರ ಭೇಟಿಯಾಗಿದ್ದೇವೆ ಎಂದರು.
ನಿನ್ನೆ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ ಹೋಗಿದ್ದಾರೆ. ಭೇಟಿಯಾಗಿ ಅವರು ನನಗೆ ಹಾರ ಹಾಕಿದ್ರು. ನಾನು ಅವರಿಗೆ ಶಾಲು ಹೊದಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹೇಳಿದೆ. ಸಂಸದ ಪ್ರತಾಪ್ ಸಿಂಹ ಹೊಂದಾಣಿಕೆ ರಾಜಕಾರಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಾಪಸಿಂಹ ಬಾಯಿಗೆ ಬಂದಂಗೆ ಮಾತನಾಡುತ್ತಾನೆ ಎಂದರು.
ನಾನು ಮತ್ತು ಶಾಮನೂರು ಶಿವಶಂಕರಪ್ಪ ಭೇಟಿಯಲ್ಲಿ ಯಾವುದೇ ರಾಜಕಾರಣ ಬೆರೆಸುವುದು ಸೂಕ್ತವಲ್ಲ ಎಂದು ಪರೋಕ್ಷವಾಗಿ ಸ್ವಪಕ್ಷೀಯರ ವಿರುದ್ಧ ಚಾಟಿ ಬೀಸಿದ್ದಾರೆ.ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ.
ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೇಯೇ ಇಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.