ದಾವಣಗೆರೆ: ಅಕ್ರಮವಾಗಿ ಡೋರ್ ನಂಬರ್ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ನಡುವೆ ವಾಕ್ಸಮರ ನಡೆದಿದೆ. ಇದೇ ವೇಳೆ ಐಎಎಸ್ ಅಧಿಕಾರಿಯಾದ ಜಿಲ್ಲಾಧಿಕಾರಿಗಳು ಶ್ರೀಮಂತರ ಮನೆಯ ಸೇವಕನಂತೆ ವರ್ತಿಸುತ್ತಿದ್ದಾರೆಂದು ಶಾಸಕ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಡಾ) ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅಕ್ರಮವಾಗಿ ಡೋರ್ ನಂಬರ್ ನೀಡಿ, ಲೇಔಟ್ ಫೈನಲ್ ಮಾಡಿದ್ದೀರಿ…!! ಯಾರನ್ನು ಕೇಳಿ ಈ ಕೆಲಸ ಮಾಡಿದ್ದೀರಿ….? ಇಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಕೂಡಲೇ ಡೋರ್ ನಂಭರ್ ವಾಪಸ್ ಪಡೆಯಬೇಕು. ಭ್ರಷ್ಟಾಚಾರದಲ್ಲಿ ನೀವೂ ಪಾಲುದಾರರಾಗಿದ್ದೀರಿ, ಯಾವುದೇ ಕಾರಣಕ್ಕೂ ಲೇ ಔಟ್ಗೆ ಅನುಮತಿ ಕೊಡಬಾರದು. ದೂಡಾ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ರಿಗೆ ತಾಕೀತು ಮಾಡಿದರು. ಆಗ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿ, ಡೋರ್ ನಂಬರ್ ನೀಡುವುದು ನಗರಸಭೆಯೇ ಹೊರತು, ದೂಡಾ ಅಲ್ಲ. ಒಂದು ವೇಳೆ ಯಾವುದೇ ಲೇ ಔಟ್, ಡೋರ್ ನಂಬರ್ ಬಗ್ಗೆ ಅನುಮಾನವಿದ್ದರೆ ಲಿಖಿತವಾಗಿ, ನಿರ್ದಿಷ್ಟವಾಗಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಐದು ವರ್ಷ ನೀವು ಲೂಟಿ ಮಾಡಿ ಹೋದವರು ಎಂದು ಹರಿಹಾಯ್ದರು.ಆಗ ಶಾಸಕ ಹರೀಶ, ಬಂದಾನ, ಗಿಂದಾನ ಅಂತೆಲ್ಲಾ ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲವೆಂದು ತಿರುಗೇಟು ನೀಡಿದರು. ಆಗ ಸಚಿವ ಎಸ್ಸೆಸ್ಸೆಂ ನೀನು ಗಲಾಟೆ ಮಾಡೋಕೆ ಬಂದಿಯಾ ಎಂದರು.
ಇದಕ್ಕೆ ಶಾಸಕ ಹರೀಶ , ಹೌದು, ನ್ಯಾಯಯುತವಾಗಿ ಗಲಾಟೆ ಮಾಡಲು ಬಂದಿದ್ದೇನೆಂದರು. ಕಡೆಗೆ, ದೂಡಾದಿಂದ ಶಾಸಕರ ಗಮನಕ್ಕೆ ತರದೇ ಅಕ್ರಮವಾಗಿ ಹೇಗೆ ಲೇಔಟ್ ಗೆ ಅನುಮತಿ ಸಿಕ್ಕಿದೆ. ನಾನೂ ದೂಡಾ ಸದಸ್ಯ. ಆಗ ಡಿಸಿ ಡಾ.ವೆಂಕಟೇಶ, ಹರಿಹರದ ವಿಚಾರ ಬಂದಾಗ ಮಾತನಾಡಿ ಎಂದರು. ಇದರಿಂದ ಆಕ್ರೋಶಗೊಂಡ ಶಾಸಕ ಹರೀಶ್, ನಾನು ಇಡೀ ಪ್ರಾಧಿಕಾರಕ್ಕೆ ಸದಸ್ಯ. ಹರಿಹರ ನಗರಕ್ಕಷ್ಟೇ ಅಲ್ಲ ಎಂದಾಗ ಮತ್ತೆ ಗದ್ದಲ ಉಂಟಾಯಿತು.
ಸಭೆ ನಂತರ ಮಾತನಾಡಿದ ಶಾಸಕ ಹರೀಶ್, ದೂಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಡೆ ನೋಡಿದರೆ ನಾಚಿಕೆಯಾಗುತ್ತಿದೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಶ್ರೀಮಂತರ ಮನೆಯ ಸೇವಕನಂತೆ ವರ್ತಿಸುತ್ತಿದ್ದಾರೆ. ನಾನು ಹೋರಾಟ ಮಾಡಿಕೊಂಡೇ ಬೆಳೆದಿದ್ದೇನೆ. ಯಾರಿಗೂ ಹೆದರುವವನೂ ನಾನಲ್ಲ. ಫೆ.9ರಂದು ದೂಡಾದಲ್ಲಿ ಭ್ರಷ್ಟಾಚಾರ ನಡೆದಿದೆ. ಕಾರ್ಯಗಳ ಸಭೆಯ ಗಮನಕ್ಕೆ ತರುವಂತೆ ಹೇಳಿದ್ದೆ. ನಾನು ಈ ಬಗ್ಗೆ ಪತ್ರವನ್ನೂ ನೀಡಿದ್ದೆ. ಆದರೆ, ಪ್ಲಾನಿಂಗ್ಗೆ ಅಪ್ರೂವಲ್ ನೀಡಿದ್ದಾರೆ. ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಜಿಲ್ಲಾಧಿಕಾರಿಯೇ ಕಾರಣವಾಗಿದ್ದು, ಭ್ರಷ್ಟಾಚಾರದ ಮೂಲಕ ಜನರ ರಕ್ತ ಕುಡಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.



