ದಾವಣಗೆರೆ: ಮುಂಗಾರು ಹಂಗಾಮು ಶುರುವಾಗಿದ್ದು, ಬೀಜ ಗೊಬ್ಬರ ಕೊಳ್ಳಲು ರೈತರು ಅಂಗಡಿಗಳಿಗೆ ಬಂದಾಗ ಅವರುಗಳು ಕೇಳಿದ ಬಿತ್ತನೆ ಬೀಜ ಗೊಬ್ಬರ ನೀಡದೆ, ಹೆಚ್ಚುವರಿಯಾಗಿ ಬೇರೆ ಬೇರೆ ರಸಗೊಬ್ಬರಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು. ಕಳಪೆ ಬೀಜ, ಗೊಬ್ಬರ ನೀಡಿದ್ರೆ ಅಂತಹ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವುದರೊಂದಿಗೆ ಪರವಾನಗಿ ರದ್ದುಗೊಳಿಸುವುದಾಗಿ ಅಪರ ಕೃಷಿ ನಿರ್ದೇಶಕ ಎಂ.ಎಸ್ ದಿವಾಕರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕೃಷಿ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದ ಅವರು ಬಿತ್ತನೆ ಬೀಜವನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು, ಒಂದು ವೇಳೆ ಕಾಳಸಂತೆಯಲ್ಲಿ ಅಥವಾ ಅಧಿಕೃತ ಮಾರಾಟಗಾರರಲ್ಲದವರು ಕಳಪೆ ಬೀಜ ಮಾರುವುದು ಕಂಡುಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದರು.
ನ್ಯಾನೊ ಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಡಬಹುದು, ನ್ಯಾನೊ ಗೊಬ್ಬರವನ್ನೂ ಖರೀದಿಸುವಂತೆ ರೈತರನ್ನು ಒತ್ತಾಯಿಸುವಂತಿಲ್ಲ, ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ಲಭ್ಯವಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ರೈತರು ಕೇವಲ ಒಂದೇ ಗೊಬ್ಬರವನು ್ನಡಿಎಪಿ ಅಥವಾ ಕಾಂಪ್ಲೆಕ್ಸ್ ಬಳಸದೇ ಸಮತೋಲಿತ ಗೊಬ್ಬರಗಳನ್ನು ಬಳಸಬೇಕು. ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಳೆಗಳಿಗೆ ಅಗತ್ಯ ಹಾಗೂ ಪೋಷಕಾಂಶ ಭರಿತ ಗೊಬ್ಬರಗಳನ್ನು ಬಳಸಿ ಎಂದರು.
ರಸಗೊಬ್ಬರ, ಬಿತ್ತನೆ ಬೀಜ ವ್ಯಾಪಾರಸ್ಥರು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯಬಾರದು, ಕೋವಿಡ್ ಸಂದರ್ಭದಲ್ಲಿ ನಿಮ್ಮ ಅಹವಾಲುಗಳನ್ನು ಪರಿಹರಿಸಿದ್ದೇವೆ, ಹಾಗಾಗಿ ರೈತ ಸ್ನೇಹಿಯಾಗಿ ನಡೆದುಕೊಳ್ಳಿ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ ಮುಂಗಾರಿನಲ್ಲಿ 2.44 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು ಬಿತ್ತನೆ ಬೀಜ, ಗೊಬ್ಬರದ ಯಾವುದೇ ಸಮಸ್ಯೆ ಇಲ್ಲ ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಚನ್ನಪ್ಪ, ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ, ರೈತ ಮುಖಂಡರುಗಳಾದ ಲೋಕಿಕೆರೆ ನಾಗರಾಜು, ದ್ಯಾಮಣ್ಣ, ಆಂಜನೇಯ ಸೇರಿದಂತೆ ಇತರರು ಹಾಜರಿದ್ದರು.



