ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಳೆಯಿಂದ 25ರವರೆಗೆ ನಮ್ಮ ದವನ-2022 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಐಇಟಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅರವಿಂದ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ 23 ರ ಬೆಳಿಗ್ಗೆ 10ಗಂಟೆಗೆ ವಿದ್ಯಾಲಯದ ಸಿವಿಲ್ ಸೆಮಿನಾರ್ ಹಾಲ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮುಖ್ಯ ಅತಿಥಿಗಳಾಗಿ ಆರ್. ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಸೋಮಶೇಖರಪ್ಪ, ಬಾಪೂಜಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಡಾ. ಎಂ. ಎಸ್. ರಾಜಕುಮಾರ್ , ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮೂರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ವಿದ್ಯಾರ್ಥಿಗಳಲ್ಲಿನ ಸಾಂಸ್ಕೃತಿಕ ಪ್ರತಿಭೆ ಹೊರತರುವುದು ಸ್ಪರ್ಧೆಯ ಮುಖ್ಯ ಉದ್ದೇಶ. ಸಂಗೀತ, ನೃತ್ಯ, ಕಲಾಪ್ರತಿಭೆ, ರಂಗಭೂಮಿ, ಕಲೆ, ಸಿನಿಮಾ ಆಟೋಗ್ರಾಫಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಇಲ್ಲಿ ವಿಜೇತರಾದವರನ್ನು ದಾವಣಗೆರೆ ವಿವಿ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾರ್ಟ್ ಮೂವಿ ಮೇಕಿಂಗ್ ಸ್ಪರ್ಧೆ ಏರ್ಪಡಿಸಿರುವುದು ಈ ಬಾರಿಯ ವಿಶೇಷ. ಒಂದು ಥೀಮ್ ಅನ್ನು ನೀಡಲಾಗುತ್ತದೆ. ಜೂನ್ 25ರಂದು ಸಮಾರೋಪ ಸಮಾರಂಭ ನಡೆಯಲಿದೆ.



