ದಾವಣಗೆರೆ: ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳದಿಂದ ಹೊನ್ನಾಳಿ ಮತ್ತು ನ್ಯಾಮತಿ ನಗರಗಳ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇವರ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಡಿ ಒಟ್ಟು 39, ಸೆಕ್ಷನ್ 6ಎ ಅಡಿಯಲ್ಲಿ 08 ಹಾಗೂ ಸೆಕ್ಷನ್ 6ಬಿ ಅಡಿಯಲ್ಲಿ 01, ಪ್ರಕರಣ ಸೇರಿದಂತೆ ಒಟ್ಟು 48 ಪ್ರಕರಣಗಳನ್ನು ದಾಖಲಿಸಿ, ರೂ. 4750 ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಯಿತು.
ತಂಡವು ಹೊನ್ನಾಳಿ ಮತ್ತು ನ್ಯಾಮತಿ ನಗರಗಳ ಸಂತೆಮೈದಾನ ಹೊಟೇಲ್, ಬಾರ್, ಪಾನ್ಶಾಪ್, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಹಾಗೂ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳು ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದರು.
ಆಡಳಿತ ವೈದ್ಯಾಧಿಕಾರಿ ಡಾ.ಆರ್.ಎಂ ಮೆಣಸಿನಕಾಯಿ, ಸಿಡಿಪಿಓ ಮಹಾಂತಸ್ವಾಮಿ ಪೂಜಾರ, ಪಿಎಸ್ಐ ರಮೇಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ ಕೋಡಿಹಳ್ಳಿ, ಹಿರಿಯ ಆರೋಗ್ಯ ಸಹಾಯಕ ಶಿವಪದ್ಮ, ಮತ್ತು ನಿಂಗಪ್ಪ ಎಂ.ಬಿ, ಜಿಲ್ಲಾ ಸಲಹೆಗಾರರಾದ ಸತೀಶ ಕಳಿಹಾಳ, ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ. ಶಿಕ್ಷಣ ಇಲಾಖೆಯ ಮುದ್ದನಗೌಡ ಮತ್ತು ಮಹಾಂತೇಶ ಎಂ.ಸಿ ಪೊಲೀಸ್ ಇಲಾಖೆಯ ಪೇದೆ ವಿಜಯ, ಇತರರು ಹಾಜರಿದ್ದರು.



