ದಾವಣಗೆರೆ: ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ 2 ರೂಪಾಯಿ ಡಾಕ್ಟ್ರು ಎಂದೇ ಖ್ಯಾತಿಗಳಿಸಿದ್ದ ಸಿದ್ಧೇಶ್ವರ ಕ್ಲಿನಿಕ್ನ ಡಾ. ಎಂ. ಬಸವಂತಪ್ಪ ಅವರು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಸವಂತಪ್ಪ ಅವರು ತಂದೆಯ ಮಾತನ್ನು ಆದರ್ಶವಾಗಿ ತೆಗೆದುಕೊಂಡು ಬಡವರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ಎರಡು ರೂಪಾಯಿ ಡಾಕ್ಟ್ರು ಖ್ಯಾತಿ ಪಡೆದಿದ್ದಾರೆ.
1951ರಲ್ಲಿ ಸಂತೇಬೆನ್ನೂರಿನ ಸಿದ್ದಪ್ಪ-ಹಾಲಮ್ಮ ದಂಪತಿಯ ಎರಡನೇ ಪುತ್ರರಾಗಿ ಜನಿಸಿದ ಬಸವಂತಪ್ಪ ಸಿರಿಗೆರೆ ಯಲ್ಲಿ ಎಸ್ಸೆಸ್ಸೆಲ್ಸಿ, ಶಿವಮೊಗ್ಗ ಸಹ್ಯಾದ್ರಿ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ನಂತರ 1987ರಲ್ಲಿ ಸಂತೇಬೆನ್ನೂರಿನಲ್ಲಿ ಸಿದ್ದೇಶ್ವರ ಕ್ಲಿನಿಕ್ ಆರಂಭಿಸಿದ್ದರು.ಬಡವರಿಗೆ ಹೊರೆಯಾಗಬೇಡ. ಅವರ ಆರೋಗ್ಯ ಕಾಪಾಡುವುದು ಎಂದು ತಂದೆ ಮಾತು ಪಾಲಿಸಿಕೊಂಡು ಬಂದಿದ್ದಾರೆ. 18 ವರ್ಷಗಳ ಕಾಲ ಕೇವಲ 2 ರೂ.ಗೆ ವೈದ್ಯ ಸೇವೆ ನೀಡಿ ಸಂತೇವೆನ್ನೂರು ಸುತ್ತಮುತ್ತ ಪ್ರಸಿದ್ಧಿಯನ್ನು ಪಡೆದಿದ್ದಾರೆ.



