ದಾವಣಗೆರೆ: ನಗರದ ವಸಂತ ರಸ್ತೆಯಲ್ಲಿರುವ ಉಪ ಬಂಧಿಖಾನೆ ಎದುರಿನಲ್ಲಿ ಯುಜಿಡಿ ನೀರು ರಸ್ತೆಗೆ ಹರಿದು ಬರುತ್ತಿದೆ. ಇಲ್ಲಿ ನೀರು ನಿಂತಿರುವುದರಿಂದ ತುಂಬಾ ಸಮಸ್ಯೆಯಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ್ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ ಮುದ್ದಜ್ಜಿ ಅವರಿಗೆ ಮನವಿ ಸಲ್ಲಿಸಿದರು.
ಯುಜಿಡಿ ಕಾಮಗಾರಿಯಿಂದಾಗಿ ಈ ತೊಂದರೆ ಆಗಿದೆ. ಸರಿಯಾಗಿ ನೀರು ಹರಿದು ಹೋಗುತ್ತಿಲ್ಲ. ಈ ರಸ್ತೆಯ ಪಕ್ಕದಲ್ಲಿ ಪೊಲೀಸ್ ಠಾಣೆ ಸಹ ಇದೆ. ನಿತ್ಯವೂ ಇಲ್ಲಿಗೆ ನೂರಾರು ಜನರು ಬರುತ್ತಾರೆ. ಜನನಿಬಿಡ ಪ್ರದೇಶವೂ ಹೌದು. ವಾಹನಗಳ ಓಡಾಟವೂ ಜಾಸ್ತಿಯಿರುತ್ತದೆ. ಇದರಿಂದಾಗಿ ಸಮಸ್ಯೆ ತುಂಬಾ ತೀವ್ರವಾಗಿದ್ದು, ಆದಷ್ಟು ಬೇಗ ನೀರು ಹರಿದು ಹೋಗುವ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಯುಜಿಡಿ ನೀರು ಮ್ಯಾನ್ ಹೋಲ್ನಿಂದ ರಸ್ತೆಯ ಮೇಲ್ಭಾಗಕ್ಕೆ ಬರುತ್ತಿದೆ. ಇದೇ ರಸ್ತೆಯಲ್ಲಿ ಜೈನ ಸಮುದಾಯದ ದೇಗುಲವಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತುಂಬಾನೇ ತೊಂದರೆಯಾಗಿದೆ. ಕೆಟ್ಟ ವಾಸನೆ ಬರುತ್ತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಿಕೊಡುವಂತೆ ಸ್ಥಳೀಯರ ಪರವಾಗಿ ಮಾನ್ಯ ಆಯುಕ್ತರನ್ನು ಆಗ್ರಹಿಸಿದರು.



