ದಾವಣಗೆರೆ: ಜಿಲ್ಲೆಯ ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗವು (ಲುಂಪಿ ಚರ್ಮ ರೋಗ) ಕಾಣಿಸಿಕೊಂಡಿದ್ದು ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ರೋಗವನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾತ್ರೆ ಮತ್ತು ಸಾಗಾಣಿಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ರೋಗದ ಪರೀಕ್ಷೆಯನ್ನು ಐ.ಸಿ.ಎ.ಆರ್-ಬೆಂಗಳೂರಿಂದ ಮಾಡಲಾಗಿದ್ದು, ಉಳಿದ ಜಾನುವಾರುಗಳಿಗೆ ದಾವಣಗೆರೆಯ ಪಶು ಆಸ್ಪತ್ರೆ ಆವರಣದಲ್ಲಿರುವ ಐಹೆಚ್ಎ ಮತ್ತು ವಿಬಿ ರವರ ರೆಪರಲ್ ಪ್ರಯೋಗಾಲಯದಲ್ಲಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಸೆಪ್ಟೆಂಬರ್ 29 ರವರೆಗೆ ಒಟ್ಟು 62 ಗ್ರಾಮಗಳಲ್ಲಿ 297 ಜಾನುವಾರುಗಳಿಗೆ ಈ ರೋಗವು ಕಂಡು ಬಂದಿದ್ದು, ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಆದೇಶವು ಸಾಮೂಹಿಕ ಜಾನುವಾರುಗಳು ಸೇರುವಂತಹ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಗೆ ಮಾತ್ರ ಅನ್ವಯಿಸುವುದು, ಇದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.



