ದಾವಣಗೆರೆ : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಹಳೇ ಕುಂದುವಾಡದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ನೂತನ ಬಡಾವಣೆಗೆ ರೈತರು ತಮ್ಮ ಜಮೀನುಗಳನ್ನು ನೀಡದಿರಲು ತೀರ್ಮಾನ ಕೈಗೊಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರೈತರು ಸ್ಪಷ್ಟಪಡಿಸಿದರು.ಸೆ. 5 ರಂದು ದೂಡಾ, ಉಪ ವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೇವೆ. ಈ ವಿಚಾರ ತಿಳಿದಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಒಪ್ಪಿಗೆ ಪಡೆದು, ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ನಾವು ಸರ್ಕಾರದ ಜತೆಗೆ ವ್ಯವಹಾರ ಮಾಡುವುದಿಲ್ಲ.ರಕ್ತ ಕೊಡುತ್ತೇವೆ ಹೊರತು ಒಂದು ಗುಂಟೆ ಜಮೀನನ್ನೂ ನೀಡುವುದಿಲ್ಲ. ಅಗತ್ಯವಾದರೆ ಹೋರಾಟಕ್ಕೂ ಸಿದ್ಧರಿದ್ದೇವೆ. ಮೂರು ವರ್ಷಗಳ ಹಿಂದೆ ದೂಡಾ ಜಮೀನು ಖರೀದಿಸುವ ಪ್ರಸ್ತಾಪ ಮುಂದಿಟ್ಟದ್ದರು. 3 ತಿಂಗಳಲ್ಲಿ ಒಂದೇ ಬಾರಿಗೆ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದರು. ಆದರೆ ಒಂದೂವರೆ ವರ್ಷ ಕಳೆದರೂ ಯಾವುದೇ ಬೆಳವಣಿಗೆ ಆಗಲಿಲ್ಲ.
ಈ ಹಿಂದೆ ಮಹಾಂತೇಶ ಬೀಳಗಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಎಕರೆಗೆ 1.28 ಕೋಟಿ ರೂ. ಮತ್ತು ಒಂದು ನಿವೇಶನ ನೀಡುವುದಾಗಿ ಹೇಳಿದರು. ನಂತರ 2 ತಿಂಗಳು ಕಳೆದರೂ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರದ ವರ್ತನೆಯಿಂದ ರೋಸಿ ಹೋಗಿದ್ದೇವೆ. ಇನ್ನು ಯಾವ ಕಾರಣಕ್ಕೂ ಸರ್ಕಾರಕ್ಕೆ ಜಮೀನು ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ನಮಗೆ ಭೂಮಿ ಕಳೆದುಕೊಂಡರೆ ಬೇರೆ ಕಡೆ ಜಮೀನು ಸಿಗುವುದು ಕಷ್ಟವಿದೆ. 3 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಬೆಲೆ ಹೆಚ್ಚಾಗಿದೆ.ಮೂರು ವರ್ಷದ ಹಿಂದೆ ಮಾಡಿದ್ದ ಪ್ರಸ್ತಾಪ ಇಟ್ಟುಕೊಂಡು ಈಗ ಜಮೀನು ಖರೀದಿಸಿದರೆ ಹೇಗೆ..? ಎಂದು ಪ್ರಶ್ನಿಸಿದರು.
ಈ ಪ್ರಕ್ರಿಯೆ ಕೈಬಿಡಿ ಎಂದು ಮೇ31 ರಂದೇ ದೂಡಾ ಆಯುಕ್ತರಿಗೆ ಮನವಿ ಮಾಡಿದ್ದೆವು. ಸೆ. 5 ರಂದು ದೂಡಾ, ಉಪ ವಿಭಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿಗೆ ಆಕ್ಷಸಿದ್ದೇವೆ ಎಂದರು.ಈ ಸಂದರ್ಭದಲ್ಲಿ ಎನ್. ಮಲ್ಲಿಕಾರ್ಜುನ, ಎಚ್. ಸೋಮಶೇಖರ್, ಎಚ್.ಎಬ್. ಗುರುನಾಥ್, ಎಚ್.ಜಿ. ಗಣೇಶಪ್ಪ, ಶಿವಣ್ಣ, ಜೆ.ಆರ್. ಮಹಾಂತೇಶ್ ಸುದ್ದಿಗೋಷ್ಠಿಯಲ್ಲಿದ್ದರು.



