Connect with us

Dvgsuddi Kannada | online news portal | Kannada news online

ದಾವಣಗೆರೆ: ಅತಿವೃಷ್ಟಿಯಿಂದ ಮನೆಹಾನಿ  ಪರಿಹಾರ ವಿತರಿಸುವಾಗ ಖುದ್ದು ಸ್ಥಳ ಪರಿಶೀಲಿಸಿ: :  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್

umashankara meeting

Home

ದಾವಣಗೆರೆ: ಅತಿವೃಷ್ಟಿಯಿಂದ ಮನೆಹಾನಿ  ಪರಿಹಾರ ವಿತರಿಸುವಾಗ ಖುದ್ದು ಸ್ಥಳ ಪರಿಶೀಲಿಸಿ: :  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್

ದಾವಣಗೆರೆ: ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡಿರುವವರಿಗೆ ವಿತರಿಸುತ್ತಿರುವ ಪರಿಹಾರ ಪ್ರಕರಣಗಳಲ್ಲಿ ಬಹುತೇಕರು ಮೊದಲ ಕಂತಿನ ಬಿಲ್ ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳದಿರುವ ಪ್ರಕರಣಗಳು ಕಂಡುಬರುತ್ತಿದ್ದು, ಫಲಾನುಭವಿಗಳನ್ನು ಗುರುತಿಸುವಾಗ ಫಲಾನುಭವಿಗಳ ನೈಜತೆ ಪರಿಶೀಲಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.

ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಹವಾಮಾನ ಹಾಗೂ ಕೋವಿಡ್ ಪರಿಸ್ಥಿತಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಮನೆಗಳಲ್ಲಿ ಯಾರೂ ವಾಸವಿರುವುದಿಲ್ಲ, ಅಥವಾ ಯಾರಾದರು ವಯಸ್ಸಾದವರೊಬ್ಬರು ವಾಸಿಸುತ್ತಿರುತ್ತಾರೆ, ನಿರುಪಯುಕ್ತವಾಗಿ ಬಿದ್ದಿರುವ ಮನೆಗಳನ್ನು ತೋರಿಸುವ ಮೂಲಕ ಒಂದು ಅಥವ ಎರಡು ಕಂತಿನ ಹಣ ಪಡೆದುಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳುವುದಿಲ್ಲ ಹಾಗಾಗಿ ವಾಸ ಇಲ್ಲದಿರುವ ಮನೆಗೇಕೆ ಪರಿಹಾರ ಕೊಡಬೇಕು.

ಪರಿಶೀಲನೆಯ ಸಂಧರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ತಪಾಸಣೆ ನಡೆಸಿ ಅಥವ ಅಕ್ಕಪಕ್ಕದವರನ್ನು ವಿಚಾರಿಸಿದರೆ ಸರಿಯಾದ ವಿವರ ದೊರೆಯುತ್ತದೆ, ಅಂತಹ ಮನೆಗಳ ನಿರ್ವಹಣೆಯು ಇರುವುದಿಲ್ಲ, ವಾಸವೂ ಇರುವುದಿಲ್ಲ, ಹಾಗಾದರೆ ಮೊದಲ ಕಂತು 95 ಸಾವಿರ ರೂಪಾಯಿಯ ಗತಿ ಏನು? ಆದ್ದರಿಂದ ಸರ್ಕಾರಕ್ಕೆ ನಷ್ಟ ಮಾಡದೆ ಸರಿಯಾದ ಫಲಾನಿಭವಿಗಳನ್ನು ಗುರುತಿಸಿ ಎಂದರು.

ನಂತರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ,ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತಿದ್ದು ಕಳೆದ ಏಳು ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ಈಗಾಗಲೇ ಶೇ, 45 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದೆ, ಹಾಗೂ 1.25 ಲಕ್ಷ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ ಮತ್ತು ರಾಗಿ ಹಾಗೂ ಶೇಂಗಾ ಬೆಳೆಯ ಬಿತ್ತನೆ ಪ್ರದೇಶ ಹೆಚ್ಚಾಗುತ್ತಲಿದೆ ಎಂದರು.

ತೋಟಗಾರಿಕೆ ಇಲಾಖೆಯ ಬೆಳೆ ವಿಸ್ತರಣೆ ಪ್ರದೇಶದಲ್ಲಿ ಯಾವ ಬೆಳೆ ಪ್ರದೇಶ ಜಾಸ್ತಿಯಾಗಿದೆ ಎಂದಾಗ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಉತ್ತರಿಸಿ ಅಡಿಕೆ ಬೆಳೆಯ ಪ್ರದೇಶವೇ ಜಾಸ್ತಿಯಾಗುತ್ತಿದ್ದು, ಈ ಬಾರಿ ತೋಟಗಾರಿಕೆ ಬೆಳೆಗಳ ವಿಸ್ಥೀರ್ಣ ಶೇ, 20ರಷ್ಟು ಹೆಚ್ಚಿದೆ. ಹಾಗೂ ಡ್ರಾಗನ್ ಪ್ರೂಟ್ ಬೆಳೆಗೂ ರೈತರು ಒಲವು ತೋರಿಸುತ್ತಿದ್ದಾರೆಂದರು.ಮೀನುಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಅಗಷ್ಟ್ ತಿಂಗಳು ಮೀನು ಮರಿ ಬಿತ್ತನೆ ಮಾಡಲು ಸಕಾಲವಾಗಿದ್ದು ನರ್ಸರಿಯಲ್ಲಿ 13 ಲಕ್ಷ ಮೀನು ಮರಿಗಳಿವೆ,125 ಲಕ್ಷ ಮೀನು ಮರಿಗಳಿಗೆ ಬೇಡಿಕೆ ಇದೆ ಎಂದರು.

ಡಿಡಿಪಿಐ ತಿಪ್ಪೇಶಪ್ಪ ಮಾಹಿತಿ ನೀಡಿ, ಶಾಲೆಗಳಲ್ಲಿ ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು 2.30 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. 190 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಹಾಗೂ ಅವರಿಗೆ 10 ಸಾವಿರ ಸಂಬಳ ನೀಡಲಾಗುವುದೆಂದರು.ಕೋವಿಡ್ ಪರಿಸ್ಥಿತಿ ಜಿಲ್ಲೆಯಲ್ಲಿ ಹೇಗಿದೆ, ಎಲ್ಲರಿಗೂ 2 ನೇ ಡೋಸ್ ಲಸಿಕೆ ಆಗಿದೆಯೇ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗಿದೆಯೇ, ಲಸಿಕಾಕರಣ ಜಗಳೂರು ತಾಲ್ಲೋಕಿನಲ್ಲಿ ಕಡಿಮೆಯಿದ್ದು ಜಿಲ್ಲೆಯ ಲಸಿಕಾಕರಣ ರಾಜ್ಯದ ಸರಾಸರಿಗಿಂತ ಕಡಿಮೆಯಿದ್ದು ಚುರುಕುಗೊಳಿಸಬೇಕೆಂದರು. ಕೋವಿಡ್ ಮಾರ್ಗಸೂಚಿ ಬೆಂಗಳೂರಿಗೆ ಮಾತ್ರ ಇದ್ದರೂ, ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದರು.

ಹಾಗೂ ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಬೆಂಗಳೂರಿನಿಂದ ಬಂದವರ ಬಗೆಗೆ ಹೆಚ್ಚು ನಿಗಾವಹಿಸಿ ಎಂದರು. ಮತ್ತು ಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಜವಾಬ್ದಾರಿ ವಹಿಸಿ ಯಾರಾದರು ಕೋವಿಡ್ ಲಕ್ಷಣಗಳಿರುವವರು ಕಂಡುಬಂದರೆ ಅಂತಹವರನ್ನು ಪರೀಕ್ಷೆಗೊಳಪಡಿಸುವ ಜವಾಬ್ದಾರಿ ಮತ್ತು ಅವರಿಗೆ ಶಾಲೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ನಿರ್ವಹಿಸಬೇಕೆಂದರು

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ 4271 ಕೋವಿಡ್ ಪರೀಕ್ಷೆ ಮಾಡಲಾಗಿದ್ದು 5 ಸಕ್ರಿಯ ಕೋವಿಡ್ ಪ್ರಕರಣಗಳಿವೆ, ಜಿಲ್ಲೆಯ ಕಳೆದ ಒಂದು ವಾರದ ಪಾಸಿಟಿವಿಟಿ ದರ 0.17 ಇದೆ. ಇಲ್ಲಿಯವರಗೆ 14504 ಸಾರಿ ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು 1451 ಪಾಸಿಟಿವ್ ಬಂದಿರುತ್ತವೆ ಹಾಗೂ 29622 ಐಎಲ್‍ಐ ಪರೀಕ್ಷೆಗೊಳಪಡಿಸಿದ್ದು 4457 ಪಾಸಿಟಿವ್ ಬಂದಿರುತ್ತವೆ. ಮೊದಲನೇ ಅಲೆಯಲ್ಲಿ 22567, ಎರಡನೇ ಅಲೆಯಲ್ಲಿ 28467 ಹಾಗೂ ಮೂರನೇ ಅಲೆಯಲ್ಲಿ 6514 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 57548 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಭತ್ತದ ಗದ್ದೆಗಳಿರುವ ಕಡೆಗಳಲ್ಲಿ ವೈರಲ್ ಜ್ವರದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ, ಜೋಡಿಕಟ್ಟೆ, ಮಾವಿನಕಟ್ಟೆ, ಕಡ್ಳೆಬಾಳು, ಅರಸಾಪುರ ಭಾಗಗಳಲ್ಲಿ ಚಿಕೂನ್ ಗುನ್ಯ ಹೆಚ್ಚಾಗುತಿದ್ದು, ಕೆಮ್ಮು ನೆಗಡಿ ಅಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಹಾಗಾಗಿ ಸರ್ವೇಕ್ಷಣೆ ಹೆಚ್ಚಾಗಬೇಕೆಂದರು,ಕೋವಿಡ್ ಪರೀಕ್ಷೆಗಳನ್ನು ದಿನಕ್ಕೆ 400 ಪರೀಕ್ಷೆಗಳನ್ನು ಮಾಡಲು ಸೂಚಿಸಿದ ಅವರು ಹೆಚ್ಚು ಕೋವಿಡ್ ಟೆಸ್ಟ್ ಮಾಡಿದರೆ ಹೆಚ್ಚು ಪ್ರಕರಣಗಳು ಬರಬಹುದೆಂಬ ಭೀತಿ ಬೇಡ ಎಂದರು.

ಸಭೆಯಲ್ಲಿ ಜಿಪಂ. ಸಿಇಓ ಡಾ. ಚೆನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್.ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮ,ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಸುಂಕದ್. ಡಾ. ನಟರಾಜು. ಡಾ.ಮುರಳೀಧರ್. ಎಲ್ಲಾ ತಾಲೋಕುಗಳ ತಹಶೀಲ್ದಾರರುಗಳು ಉಪಸ್ಥಿತರಿದ್ದರು.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top