ದಾವಣಗೆರೆ: ಮುಂಬರುವ ಮಳೆಗಾಲದಲ್ಲಿ ಡೆಂಗ್ಯೂ ಹಾಗೂ ಚಿಕನ್ಗುನ್ಯದಂತಹ ಕೀಟಜನ್ಯ ರೋಗಗಳ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ನಾಗರಿಕರು ತಮ್ಮ ಜವಾಬ್ದಾರಿ ಅರಿತು ತಮ್ಮ ಮನೆ ಹಾಗೂ ಸುತ್ತ-ಮುತ್ತಲಿನ ಸ್ಥಳಗಳು ಶುಭ್ರವಾಗಿರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮ್ಮ ಹಾಗೂ ನಿಮ್ಮ ಕುಟುಂಬದವರ ರಕ್ಷಣೆ ನಿಮ್ಮದೇ ಜವಾಬ್ದಾರಿ ತಮ್ಮ ನೆರೆಹೊರೆಯವರಿಗೂ ಈ ಸಂದೇಶ ಸಾರುವ ಮೂಲಕ ಸರ್ಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದರು.
ಈ ಕುರಿತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಐ.ಇ.ಸಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗಗಳ ಹರಡುವಿಕೆ ಬಗೆಗೆ ಹಾಗೂ ಜಾಗರೂಕತೆ ಹೆಚ್ಚು ಪ್ರಚಾರ ನೀಡಬೇಕು ಎಂದು ಹೇಳಿದರು.
ಮುನ್ನೆಚ್ಚರಿಕೆಯ ಕ್ರಮಗಳಾಗಿ ತೆರೆದಿಟ್ಟ ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ, ಪುನಃ ಭರ್ತಿ ಮಾಡಿಕೊಂಡು ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿ ಟೈರ್ಗಳನ್ನು ಬಿಸಾಡದೆ, ಅವುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಡುವುದು ಇಲ್ಲವೇ ಆದಷ್ಟು ಶೀಘ್ರವಾಗಿ ಇವುಗಳನ್ನು ವಿಲೇವಾರಿ ಮಾಡುವುದು. ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಥವಾ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು
ಐ.ಪಿ.ಸಿ ಸೆಕ್ಷನ್ 270 ರ ಅಡಿ ಕೇಸು:ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಒಂದು ನಿಗದಿತ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಕೇಸುಗಳು ಬಂದರೆ ಆ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವವರ ವಿರುದ್ಧ ಐಪಿಸಿ ಸೆಕ್ಷನ್ 270 ರ ಅಡಿ ಕೇಸು ದಾಖಲಿಸಲಾಗುವುದು ಹಾಗಾಗಿ ಯಾವುದೇ ಅನುತ್ಪಾದಕ ವಸ್ತುಗಳು ಬಿದ್ದಿರುವ ಕಡೆ ಸೊಳ್ಳೆಗಳು ಆಶ್ರಯ ಪಡೆಯದಂತೆ ಆ ಸ್ಥಳವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕಾಗಿರುವುದು ನಿಮ್ಮ ಕರ್ತವ್ಯ, ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕುವಾರು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ಡೆಂಗ್ಯೂ ಮತ್ತು ಚಿಕನ್ಗುನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಹೇಳಿದರು.
ಜಿಲ್ಲಾ ಕೀಟ ಜನ್ಯರೋಗ ನಿಯಂತ್ರಣಾಧಿಕಾರಿ ಡಾ.ನಟರಾಜ್.ಕೆ ಮಾತನಾಡಿ, ನಿದ್ದೆ ಮಾಡುವ ಮಕ್ಕಳು ಹಾಗೂ ವಿಶ್ರಾಂತಿ ಪಡೆಯುವ ವೃದ್ಧರು ತಪ್ಪದೇ ರಾತ್ರಿಯ ವೆಳೆ ಮಾತ್ರವಲ್ಲದೆ ಹಗಲಿನಲ್ಲಿಯೂ ಸಹ ಸೊಳ್ಳೆ ಪರದೆಯನ್ನು ಉಪಯೊಗಿಸಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು ಮತು ಸೊಳ್ಳೆಗಳಿಂದ ಹರಡುವ ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಡೆಂಗೀ ದಿನ 2022ರ “ಡೆಂಗೀ ತಡೆಗಟ್ಟಬಹುದು : ಬನ್ನಿ ಎಲ್ಲರೂ ಕೈ ಜೋಡಿಸೋಣ” ಎಂಬ ಘೋಷವಾಕ್ಯ ಒಳಗೊಂಡ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜರ್ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಡಿಯುಡಿಸಿ ಅಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿಗಳಾದ ರೇಷ್ಮಾ ಹಾನಗಲ್, ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಬಸವನಗೌಡ ಕೊಟ್ಟೂರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರೇಷ್ಮಾ ಕೌಸರ್, ಆರ್ಸಿಹೆಚ್ ಮೀನಾಕ್ಷಿ, ಡಾ.ಸುರೇಶ್ ಬಾರ್ಕಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.