ದಾವಣಗೆರೆ: ಆತ್ಮನಿರ್ಭರ ಕೃಷಿ ಹಾಗೂ ಸಿರಿ ಧಾನ್ಯಗಳ ವರ್ಷಾಚರಣೆಯ ರೈತ ಮೇಳ ಹಾಗೂ ರಾಜ್ಯ ಸರ್ಕಾರದ ಯೋಜನೆ ಫಲಾನುಭವಿಗಳ ಸಮಾವೇಶವನ್ನು ದಾವಣಗೆರೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಾಳೆ (ಏ.26) ಬೆಳಗ್ಗೆ 11ಕ್ಕೆ ನಗರದ ಶಾಮನೂರು ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 11ಕ್ಕೆ ರಾಜ್ಯಸಭಾ ಸದಸ್ಯ, ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರಪ್ಪ, ಮಾಡಾಳು ವಿರುಪಾಕ್ಷಪ್ಪ, ಎಂ.ಪಿ.ರೇಣುಕಾಚಾರ್ಯ, ಪ್ರೋ.ಲಿಂಗಣ್ಣ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ರೈತ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಪಾಲಾಕ್ಷಪ್ಪ ಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಆಗಮಿಸುವರು ಎಂದು ಮಾಹಿತಿ ನೀಡಿದರು.
ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ನಿಯೋಜಿಸಲಾಗಿದೆ. ಬೇವು ಲೇಪಿತ ಯೂರಿಯಾದಿಂದಾಗಿ ಗೊಬ್ಬರದ ಕೊರತೆ ನೀಗಿದ್ದು , ಯೂರಿಯ ಗೊಬ್ಬರದ ಮರುಉಪಯೋಗ ಸಂಪೂರ್ಣವಾಗಿ ನಿಂತಿದೆ. ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಎನ್ನುವ ಕೃಷಿ ಸುಧಾರಣೆಯ ಘೋಷಣೆಯ ಜೊತೆಗೆ ರೈತರ ಇಳುವರಿಗೆ ಉತ್ತಮ ದರ ನಿಗದಿಪಡಿಸಿ 2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲದೇ ಕಿಸಾನ್ ಕಾರ್ಡ್ಗಳ ವಿತರಣೆಯ ಮೂಲಕ ರೈತರಿಗೆ ಬ್ಯಾಂಕ್ ಸೌಲಭ್ಯಗಳ ವಿಸ್ತರಣೆ ಮಾಡಲಾಗಿದ್ದು, ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಮಾಡಲಾಗಿದೆ ಮಣ್ಣಿನ ಫಲವತ್ತತೆ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಪ್ರತಿ ಬಿಂದು ನೀರಿನಿಂದ ಹೆಚ್ಚು ಬೆಳೆ ತೆಗೆಯುವ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಶಿರಮಗೊಂಡನಹಳ್ಳಿ ಮಂಜಣ್ಣ, ಬಾತಿ ಶಿವಕುಮಾರ್, ಹೊನ್ನೂರು ವಿರೇಶ್, ಗುಮ್ಮನೂರು ಮುರುಗೇಶ್, ಅಣಜಿ ಗುಡ್ಡೇಶ್ ಇದ್ದರು.



