ದಾವಣಗೆರೆ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಸೋಕು ಇಳಿಕೆಯಾಗಿರುವುದರಿಂದ ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿನ ಖೈದಿಗಳ ಸಂದರ್ಶಿಸುವ ಸಂಬಂಧಿಗಳಿಗೆ ನೇರ ಸಂದರ್ಶನವನ್ನು ಮಾ.21 ರಿಂದ ಪುನರಾರಂಭಿಸಲಾಗುತ್ತಿದೆ ಎಂದು ದಾವಣಗೆರೆ ಜಿಲ್ಲಾ ಕಾರಾಗೃಹದ ಅಧೀಕ್ಷಕ ಭಾಗೀರಥಿ ಎಲ್ ಅವರು ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ವಯ ಮುಂಜಾಗ್ರತ ಕ್ರಮವಾಗಿ, ದಾವಣಗೆರೆ ಕಾರಾಗೃಹದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು. ಹೀಗಾಗಿ ಬಂದಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ ನೋಂದಾಯಿಸಿಕೊಂಡು ನಿಗಧಿಪಡಿಸಲಾಗುವ ದಿನ ಮತ್ತು ಸಮಯಕ್ಕೆ ಆಗಮಿಸಬೇಕು.
ಸಂದರ್ಶನಕ್ಕೆ ಬರುವ ಸಂದರ್ಶಕರು ಯಾವುದೇ ರೀತಿಯ ಕೋವಿಡ್ ರೋಗ ಲಕ್ಷಣಗಳನ್ನು ಹೊಂದಿರಬಾರದು ಹಾಗೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆಗಳನ್ನು ಹಾಕಿಸಿಕೊಂಡಿರುವ ಲಸಿಕಾ ಪ್ರಮಾಣಾ ಪತ್ರವನ್ನು ಹಾಜರುಪಡಿಸಬೇಕು ಅಲ್ಲದೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-254446, ಮೊಬೈಲ್ ಸಂಖ್ಯೆ 9480806464, ಇಮೇಲ್ ವಿಳಾಸ ssjdvg.prisons-kar@gov.in ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಭಾಗೀರಥಿ ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



