ಹರಿಹರ: ನನ್ನ 4 ವರ್ಷಗಳ ಅವಧಿಯಲ್ಲಿ ಹರಿಹರ ಕ್ಷೇತ್ರ ಅಭಿವೃದ್ಧಿಗೆ 40 ಕೋಟಿ ರೂ. ಮಂಜೂರು ಆಗಿದೆ. ಈಗಾಗಲೇ 33 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನು 7 ಕೋಟಿ ಅನುದಾನ ಬಿಡುಗಡೆ ಪ್ರಗತಿಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017-18ನೇ ಸಾಲಿನಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ವಿವಿಧ ಗ್ರಾಮಗಳಿಗೆ 2 ಕೋಟಿ ರೂ., ಕೊಂಡಜ್ಜಿ ಗ್ರಾಮದ ಸಮುದಾಯ ಭವನಕ್ಕೆ 1 ಕೋಟಿ, ಕೊಂಡಜ್ಜಿ-ಕಕ್ಕರಗೊಳ್ಳ ರಸ್ತೆ ಅಭಿವೃದ್ಧಿಗೆ 5 ಕೋಟಿ, ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆಗೆ 1 ಕೋಟಿ, ಕೊಂಡಜ್ಜಿ ಪ್ರವಾಸೋದ್ಯಮಕ್ಕೆ 1 ಕೋಟಿ, ಕಕ್ಕರಗೊಳ್ಳ-ಚಿಕ್ಕಬಿದರಿ ರಸ್ತೆ ಅಭಿವೃದ್ಧಿಗೆ 10 ಕೋಟಿ, ಎಚ್.ಎಂ. ರಸ್ತೆಯಿಂದ ಅರಸೀಕೆರೆ ಸೇರುವ ರಸ್ತೆಗೆ 5 ಕೋಟಿ ರೂ. ಸೇರಿದಂತೆ ಹತ್ತಾರು ಯೋಜನೆಗಳಿಗೆ ಅನುದಾನ ನೀಡಿದ್ದೇನೆ. ತಾಲೂಕಿನ 30 ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನೀರಿನ ಸೌಲಭ್ಯ ಕಲ್ಪಿಸಲು ಸಹಕಾರ ನೀಡಿದ್ದೇನೆ. ನಾನು ಮೂಲತಃ ಇದೇ ಕ್ಷೇತ್ರದವನಾಗಿರುವುದರಿಂದ ಸಹಜವಾಗಿಯೆ ಗರಿಷ್ಠ ಅನುದಾನ ನೀಡಿದ್ದೇನೆ ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಭೇದವಿಲ್ಲದೆ ಎಲ್ಲರ ಕೋರಿಕೆಯನ್ನು ಸಾಧ್ಯವಾದಷ್ಟು ಈಡೇರಿಸಿದ್ದೇನೆ.. ರಂಗಭೂಮಿ ಹಿನ್ನೆಲೆಯಿಂದ ಬಂದ ನಾನು, ಕೊಂಡಜ್ಜಿಯ ಕುಷ್ಠ ರೋಗ ನಿವಾರಣಾ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಾಗವನ್ನು ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಅಲ್ಲಿ ಪೊಲೀಸ್ ಪಬ್ಲಿಕ್ ಶಾಲೆ, ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ಕೊಂಡಜ್ಜಿ ಶೈಕ್ಷಣಿಕ ಹಬ್ ಆಗಿ ಬೆಳೆಯುತ್ತಿದೆ. ಕೊಂಡಜ್ಜಿ ಬಸಪ್ಪ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರವಾಗಿ ರೂಪಿಸಿ ಕೊಂಡಜ್ಜಿಯನ್ನು ಪ್ರವಾಸಿ ತಾಣವಾಗಿಸುವ ಗುರಿ ಇದೆ. ನಾನು ಅಥವಾ ಅಣ್ಣನ ಮಗ ನಿಖೀಲ್ ಕೊಂಡಜ್ಜಿಯಾಗಲೀ ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳಲ್ಲ ಎಂದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖೀಲ್ ಕೊಂಡಜ್ಜಿ ಇದ್ದರು.



