ಶಿವಮೊಗ್ಗ: ಹಾಲು ಸಾಗಣೆಯ ದರ ಶಿಮುಲ್ಗೆ ಹೆಚ್ಚಾಗುತ್ತಿರುವುದರಿಂದ ದಾವಣಗೆರೆಯಲ್ಲಿ ಒಂದು ಹಾಲು ಉತ್ಪಾದನಾ ಘಟಕ ಪ್ರಾರಂಭಿಸುವ ಕುರಿತು ಚಿಂತನೆ ಇದೆ ಎಂದು ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ( ಶಿಮುಲ್) ಅಧ್ಯಕ್ಷ ಶ್ರೀಪಾದ್ ರಾವ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಇಲ್ಲಿ ಹಾಲಿನ ಘಟಕ ಪ್ರಾರಂಭವಾಗುವುದರಿಂದ ಹಾಲನ್ನು ದಾವಣಗೆರೆ ಹಾಗೂ ಚಿತ್ರದುರ್ಗದಿಂದ ತಂದು, ಅದನ್ನು ಮತ್ತೆ ವಾಪಸ್ ಕಳುಹಿಸುವ ಸಾಗಣೆ ವೆಚ್ಚ ಅಧಿಕವಾಗುತ್ತಿರುವುದರಿಂದ ದಾವಣಗೆರೆಯಲ್ಲಿಯೇ ಹಾಲಿನ ಘಟಕವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಸದ್ಯ ಹಾಲಿದ ದರ ಏರಿಕೆ ಮಾಡುವುದರಿಂದ ಶಿಮುಲ್ಗೆ ಪ್ರತಿ ತಿಂಗಳು 4.5 ಕೋಟಿ ಹೊರೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ನಷ್ಟದಲ್ಲಿದ್ದ ಶಿಮುಲ್ ಹಾಲಿ ಲಾಭದ ಹಾದಿಯಲ್ಲಿದೆ. ಮಾರ್ಚ್ ವೇಳೆ ಇದು 6 ರಿಂದ 7 ಕೋಟಿ ರೂ. ಲಾಭಗಳಿಸುವ ನಿರೀಕ್ಷೆ ಇದೆ. ಇದೇ ರೀತಿ ಹಾಲಿನ ದರ ಏರಿಕೆಯನ್ನು ಗ್ರಾಹಕರಿಗೆ ಕಳೆದ ಮೂರು ವರ್ಷಗಳಿಂದ ಮಾಡಿಲ್ಲ, ಹಾಲಿನ ದರ 5 ರೂ. ಮಾಡಬೇಕೆಂದು ಪ್ರಸ್ತಾವನೆಯನ್ನು ಸಿಎಂಗೆ ಕಳುಹಿಸಲಾಗಿದೆ. ದರ ಏರಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದು ವಿವರಿಸಿದರು.



