ದಾವಣಗೆರೆ: ದಾವಣಗೆರೆಯ ಜಿಲ್ಲೆಯ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಬುಳ್ಳೇನಹಳ್ಳಿ ಗ್ರಾಮದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿ ಅಥವಾ ತಹಶೀಲ್ದಾರ್, ಜಗಳೂರು ತಾಲ್ಲೂಕು ಕಚೇರಿಯಿಂದ ಪಡೆಯಬಹುದು. ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿವಸದೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ ಸಲ್ಲಿಸಬೇಕು. ಅವಧಿಯ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಬುಳ್ಳೇನಹಳ್ಳಿ ಗ್ರಾಮದ ಕಸ್ತೂರಿಪುರ ವ್ಯಾಪ್ತಿಗೆ ಮಂಜೂರು ಮಾಡಲು ಉದ್ದೇಶಿಸಲಾಗಿರುವ ಹೊಸ ನ್ಯಾಯಬೆಲೆ ಅಂಗಡಿಗೆ 60-ಅಂತ್ಯೋದಯ, 252-ಬಿಪಿಎಲ್(ಅಕ್ಷಯ), ಎಪಿಎಲ್-10 ಸೇರಿದಂತೆ ಅಂದಾಜು ಒಟ್ಟು 322 ಪಡಿತರ ಚೀಟಿಗಳನ್ನು ನಿಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಹೊಸ ನ್ಯಾಯಬೆಲೆ ಅಂಗಡಿಗೆ ಒಂದು ತಿಂಗಳಿಗೆ ಪಡಿತರ ಎತ್ತುವಳಿಗೆ ಅವಶ್ಯವಿರುವ ಕನಿಷ್ಠ ಮೊತ್ತ ರೂ. 50,000.
ಅರ್ಜಿಯನ್ನು ಜಂಟಿ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ ಸಲ್ಲಿಸತಕ್ಕದ್ದು. ಅರ್ಜಿದಾರರು ಅರ್ಜಿ ನಮೂನೆ ‘ಎ’, ಸಹಕಾರ ಸಂಘ/ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ, ಕಳೆದ 3 ವರ್ಷಗಳ ದೃಡಿಕರಣ ಲೆಕ್ಕ ಪರಿಶೋಧನಾ ವರದಿ ಮತ್ತು ಉಪನಿಯಮಗಳು(ಬೈಲಾ), ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ, ಕರ್ನಾಟಕ ಸೊಸೈಟೀಸ್ ರಿಜೀಸ್ಟ್ರೇಷನ್ ಆಕ್ಟ್ 1959 ಅಡಿ ವಿಚಾರಣೆ, ಟ್ರಯಲ್ ಮತ್ತು ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ. ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಡೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ, ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಾಗ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ) ಆದೇಶ 2018 ರಲ್ಲಿ ಆದ್ಯತೆಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



