ದಾವಣಗೆರೆ: ಹಳೇ ಕುಂದವಾಡದಿಂದ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಟ್ರ್ಯಾಕ್ಟರ್ ಶೋರೂಮ್ ಮಾಲೀಕನೊಬ್ಬ ತಮಗೆ ಸೇರಿದ್ದು ಎಂದು ಇಡೀ ರಸ್ತೆಗೆ ಬೇಲಿ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಕುಂದವಾಡ ಗ್ರಾಮಸ್ಥರು ರಸ್ತೆಗೆ ಹಾಕಿದ್ದ ತಂತಿ ಬೇಲಿ ತೆರವುಗೊಳಿಸಿ, ಸ್ಥಳಕ್ಕೆ ಆಗಮಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಪಕ್ಕದಲ್ಲಿದ್ದ ನಿವೇಶನದೊಂದಿಗೆ ಇಡೀ ರಸ್ತೆಯೇ ನನಗೆ ಸೇರಿದ್ದೆಂದು ಬೇಲಿ ಹಾಕಿಸ್ದರು. ಇದರಿಂದ ಸಾರ್ವಜನಿಕರು ರಸ್ತೆ ಇಲ್ಲದೆ ಪರದಾಡುವಂತಾಗಿತ್ತು. ದಾವಣಗೆರೆ ನಗರದಿಂದ ಹಳೇ ಕುಂದುವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ರಾತ್ರೋ ರಾತ್ರಿ ಬೇಲಿ ಹಾಕಿದ್ದರು. ನಮಗೆ ಸಂಚರಿಸಲು ತೊಂದರೆಯಾಗ್ತಿದೆ ಬೇಲಿ ತೆಗೆದುಬಿಡಿ ಎಂದು ಮಾಲೀಕನ ಬಳಿ ಜನ ಮನವಿ ಮಾಡಿದ್ರೂ ಯಾವುದಕ್ಕೂ ಜಗ್ಗದ ನಿವೇಶನದ ಮಾಲೀಕ ಶಿವುಕುಮಾರ್, ಬೇಲಿ ತೆಗೆಯದೆ ಉದ್ಧಟತನ ಮೆರೆದಿದ್ದಾರೆ.
ನಾನು ಬೇಲಿ ಹಾಕಿರುವ ನಿವೇಶನ ನನಗೆ ಸೇರಿದ್ದು ಎಂದು ಪಾಲಿಕೆಯಿಂದ ನೀಡಿದ ದಾಖಲೆ ಪ್ರದರ್ಶಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇದರಿಂದಾಗಿ ಜನರು ರಸ್ತೆ ದಾಟಲು ಪರದಾಟ ಅನುಭವಿಸುತ್ತಿದ್ದರು. ಪರಿಸ್ಥಿತಿ ನೋಡಿ ಜನರು ತಾಳ್ಮೆ ಕಳೆದುಕೊಂಡು ಕಲ್ಲಿನ ಕಂಬ, ತಂತಿ ಬೇಲಿ ಕಿತ್ತೊಗೆದು ಆಕ್ರೋಶ ಪ್ರದರ್ಶಿಸಿದ್ರು. ಇದಲ್ಲದೆ ಪಾಲಿಕೆಗೆ ಆಗಮಿಸಿದ ಹಳೇಕುಂದವಾಡದ ಜನರು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ವಿರುದ್ಧ ಕಿಡಿಕಾರಿದರು. ನಂತರ ಜಾಗ ಒತ್ತುವರಿ ಮಾಡಲಾಗಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ತಿಳಿಸಿದ್ದಾರೆ.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ಮಾಡಿದ ಗ್ರಾಮಸ್ಥರು. ಒತ್ತುವರಿ ತೆರವು ಮಾಡಿ ರಸ್ತೆ ಹದ್ದುಬಸ್ತು ಮಾಡಬೇಕು ಎಂದು ಮನವಿ ಮಾಡಿದರು.ಸರ್ಕಾರದ ದಾಖಲೆಯಂತೆ 80 ಅಡಿ ಹದ್ದುಬಸ್ತು ಮಾಡಿಕೊಡಿ ಎಂದು ಒತ್ತಾಯಿಸಿದರು. ಡಿಸಿ ನೇತೃತ್ವದಲ್ಲಿ ಹದ್ದುಬಸ್ತ್ ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿ,ಒಂದು ವಾರದೊಳಗೆ ಆಗಿರುವ ಒತ್ತುವರಿ ತೆರವುಗೊಳಿಸಿ ಹದ್ದು ಬಸ್ತ್ ಮಾಡುವಂತೆ ಸೂಚಿಸಿದರು. ಒಂದು ವಾರದಲ್ಲಿ ಹದ್ದುಬಸ್ತು ಮಾಡದಿದ್ದಲ್ಲಿ ಕುಂದುವಾಡ ಕೆರೆ ಬಂದ್ ಮಾಡಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.



