ದಾವಣಗೆರೆ: ಶಾಲಾ ಮಕ್ಕಳಿಗೆ ಬಿಸಿ ಊಟದ ಜತೆ ಮೊಟ್ಟೆ ವಿತರಣೆ ನಿಲ್ಲಿಸುವಂತೆ ಕೆಲ ಮಠಾಧೀಶರು ಹೇಳಿಕೆ ನೀಡುತ್ತಿದ್ದು, ಸರ್ಕಾರ ಅದಕ್ಕೆ ಕಿವಿಗೊಡದೆ ಮೊಟ್ಟೆ ವಿತರಣೆ ಕಾರ್ಯ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯಕೋಳಿ ಸಾಕಣೆದಾರರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್, ಮಕ್ಕಳಲಿನ ಅಪೌಷ್ಠಿಕತೆ ಕಾರಣದಿಂದಾಗಿ ಸರ್ಕಾರ ಮೊಟ್ಟ ನೀಡುವುದನ್ನು ಜಾರಿಗೊಳಿಸಿದ್ದು, ಇದರ ಬಗ್ಗೆ ಕೆಲ ಮಠಾಧೀಶರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಅವರ ಆಹಾರ ಪದ್ಧತಿಗೆ ಸರಿಯಾಗದಿದ್ದರೆ, ಅದಕ್ಕೆ ಬೇರೆ ಕೇಳಲಿ. ಆದರೆ, ಮೊಟ್ಟೆ ಕೊಡುವುದನ್ನು ನಿಲ್ಲಿಸಿ ಎಂದು ಕೇಳುವುದು ಸರಿಯಲ್ಲ. ಒಂದು ವೇಳೆ ಸರ್ಕಾರ ಮೊಟ್ಟೆ ಕೊಡುವವುದನ್ನು ನಿಲ್ಲಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಮೊಟ್ಟೆ ವಿತರಣೆಯಿಂದ ಕೋಳಿ ಮಾಂಸ ಮತ್ತು ಕೋಳಿ ಮೊಟ್ಟೆಗಳ ಉತ್ಪಾದಿಸುವ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನು ಮೆಕ್ಕೆಜೋಳ, ಸೊಯಾಬೀನ್ ಮತ್ತು ಅಕ್ಕಿ ನುಚ್ಚು ಸೇರಿದಂತೆ ರೈತರು ಬೆಳೆದ ಧಾನ್ಯಗಳನ್ನು ಕೋಳಿಗಳಿಗೆ ಆಹಾರವಾಗಿ ಹಾಕುತ್ತಿದ್ದು, ರೈತರಿಗೆ ಮಾರುಕಟ್ಟೆ ಒದಗಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಐಗೂರ್ ಶಿವಮೂರ್ತಪ್ಪ, ಅಣಜಿ ಶಿವಮೂರ್ತಿ, ತಿಮ್ಮೇಶ್, ನೂರುದ್ದೀನ್ ಹಾಜರಿದ್ದರು.



