ದಾವಣಗೆರೆ: ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ದೊರಕುವಂತಾಗಲು ಇ-ಶ್ರಮ ಪೋರ್ಟಲ್ನಲ್ಲಿ ಜಿಲ್ಲೆಯ ಎಲ್ಲ ವರ್ಗದ ಕಾರ್ಮಿಕರನ್ನು ತಪ್ಪದೆ ನೊಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಸಂಘಟಿತ ಕಾರ್ಮಿಕ ವರ್ಗದಲ್ಲಿ ಬರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ನರೇಗಾ ಕೂಲಿ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್ಗಳು, ಬೀದಿಬದಿ ವ್ಯಾಪಾರಿಗಳು, ಚಿಂದಿ ಆಯುವವರು, ವಾಹನ ಮೆಕ್ಯಾನಿಕ್ಗಳು ಸೇರಿದಂತೆ ಸುಮಾರು 379 ಬಗೆಯ ವರ್ಗಗಳ ಕಾರ್ಮಿಕರಿಗೆ ಸಂಬಂಧಿಸಿದಂತೆ ಸೂಕ್ತ ಅಂಕಿ-ಅಂಶಗಳನ್ನು ಸಂಗ್ರಹಿಸಿ, ಅವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ನೀಡುವುದು ಅಗತ್ಯವಾಗಿರುತ್ತದೆ ಎಂದರು.
ಕೋವಿಡ್-19 ಸೋಂಕು ವ್ಯಾಪಕವಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚು ಕಷ್ಟ-ನಷ್ಟ ಅನುಭವಿಸಿದರು. ಆದರೆ ಅಸಂಘಟಿತ ವಲಯದ ಕಾರ್ಮಿಕರ ನಿಖರ ಅಂಕಿ-ಅಂಶ ಇಲ್ಲದ ಕಾರಣ, ಸರ್ಕಾರದ ಸೌಲಭ್ಯ ಪಡೆಯಲು ತೀವ್ರ ತೊಂದರೆ ಎದುರಾಯಿತು. ಇಂತಹ ಸಮಸ್ಯೆ ಪರಿಹರಿಸಲೆಂದೇ ಸರ್ಕಾರ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿ, ಇದರಲ್ಲಿ ಅಸಂಘಟಿತ ಕಾರ್ಮಿಕರು ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಕೇವಲ 31495 ಕಾರ್ಮಿಕರು ಮಾತ್ರ ಇ-ಶ್ರಮ ಪೋರ್ಟಲ್ www.eshram.gov.in ನಲ್ಲಿ ನೊಂದಣಿ ಮಾಡಿಕೊಂಡಿದ್ದು, ಉಳಿದ ಅರ್ಹ ಕಾರ್ಮಿಕರು ಇನ್ನೂ ನೊಂದಣಿ ಮಾಡಿಸಿಕೊಂಡಿಲ್ಲ. ಸರ್ವೋಚ್ಛ ನ್ಯಾಯಾಲಯವೂ ಕೂಡ ಅಸಂಘಟಿತ ವರ್ಗದ ಕಾರ್ಮಿಕರ ದತ್ತಾಂಶ ಸಂಗ್ರಹಣೆಗೆ ಆದೇಶ ನೀಡಿರುತ್ತದೆ. ಅಸಂಘಟಿತ ವಲಯದ ಎಲ್ಲ ಕಾರ್ಮಿಕರು ಇ-ಶ್ರಮ ಪೋರ್ಟಲ್ ನಲ್ಲಿ ಕೂಡಲೆ ಹೆಸರು ನೊಂದಾಯಿಸಿಕೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ಕ್ರಮ ವಹಿಸಬೇಕು.
ವಿವಿಧ ಕಾರ್ಮಿಕ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಮುಂದೆಬಂದು, ತಮ್ಮ ಸಂಘಟನೆಗಳಿಗೆ ಸಂಬಂಧಿಸಿದ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ನಲ್ಲಿ ನೊಂದಣಿ ಮಾಡಿಸಬೇಕು. ಸಂಘಟನೆಗಳು ಇಲಾಖೆಯನ್ನು ಸಂಪರ್ಕಿಸಿ, ಸ್ಥಳ ಹಾಗೂ ದಿನಾಂಕ ನಿಗದಿಪಡಿಸಿದರೆ, ಇಲಾಖೆ ವತಿಯಿಂದಲೇ ಕಾರ್ಮಿಕರ ನೊಂದಣಿ ಮಾಡುತ್ತಾರೆ. ಇದು ಸಂಪೂರ್ಣ ಉಚಿತವಾಗಿದ್ದು, ಯಾರೂ ಕೂಡ ಹಣ ನೀಡುವ ಅಗತ್ಯವಿಲ್ಲ. ನೊಂದಣಿ ಮಾಡಿಸುವ ನೆಪದಲ್ಲಿ ಸಂಘಟನೆಗಳು ಅಥವಾ ಯಾವುದೇ ವ್ಯಕ್ತಿಗಳು ಹಣ ವಸೂಲಿಗೆ ಮುಂದಾದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಇ-ಶ್ರಮ ಪೋರ್ಟಲ್ನಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೊಂದಣಿಯಲ್ಲಿ ರಾಜ್ಯದಲ್ಲಿ ಬೀದರ್ ಜಿಲ್ಲೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಿ ಮೊದಲ ಸ್ಥಾನದಲ್ಲಿದ್ದರೆ, ದಾವಣಗೆರೆ ಜಿಲ್ಲೆ 17 ನೇ ಸ್ಥಾನದಲ್ಲಿದೆ. ಹೀಗಾಗಿ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಜಿಲ್ಲೆಯಲ್ಲಿ ಎಲ್ಲ ಅಸಂಘಟಿತ ವಲಯದ ಕಾರ್ಮಿಕರ ನೊಂದಣಿ ಆಗಬೇಕು. ರಾಜ್ಯ ಮಟ್ಟದಲ್ಲಿ ಜಿಲ್ಲೆ ಮೊದಲ ಸ್ಥಾನಕ್ಕೇರಬೇಕು. ಈ ದಿಸೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಶ್ರಮ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸಬೇಕು. ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮುಂದಾಳತ್ವ ವಹಿಸಿ, ತಮ್ಮ ತಮ್ಮ ಸಂಘಟನೆಗಳ ಸದಸ್ಯರ ನೊಂದಣಿಯನ್ನು ಉಚಿತವಾಗಿ ಮಾಡಿಸಲು ಮುಂದಾಗಬೇಕು. ಇದಕ್ಕೆ ಬೇಕಾದ ಅಗತ್ಯ ನೆರವನ್ನು ಕಾರ್ಮಿಕ ಇಲಾಖೆ ನೀಡಲು ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಯಾರು ನೊಂದಣಿ ಮಾಡಿಸಬಹುದು : ಅಸಂಘಟಿತ ಕಾರ್ಮಿಕ ವರ್ಗದಲ್ಲಿ ಬರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ನರೇಗಾ ಕೂಲಿ ಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್ಗಳು, ಬೀದಿಬದಿ ವ್ಯಾಪಾರಿಗಳು, ಚಿಂದಿ ಆಯುವವರು, ವಾಹನ ಮೆಕ್ಯಾನಿಕ್ಗಳು ಸೇರಿದಂತೆ ಸುಮಾರು 379 ಬಗೆಯ ವರ್ಗಗಳ ಕಾರ್ಮಿಕರು, ಭವಿಷ್ಯನಿಧಿ ಹಾಗೂ ಇಎಸ್ಐ ಸೌಲಭ್ಯ ಇಲ್ಲದೇ ಇರುವಂತಹ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ನೊಂದಣಿ ಮಾಡಿಸಬಹುದು. ವಯೋಮಿತಿ 16 ರಿಂದ 59 ವರ್ಷದೊಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು.
ಬೇಕಿರುವ ದಾಖಲೆ ಹಾಗೂ ನೊಂದಣಿ ವಿಧಾನ : ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಇವರಗಳು, ಇಷ್ಟು ದಾಖಲೆ ಲಭ್ಯವಿದ್ದರೆ, ಇ-ಶ್ರಮ ಪೋರ್ಟಲ್ನಲ್ಲಿ ನೊಂದಣಿ ಮಾಡಿಸಬಹುದು. ಇ-ಶ್ರಮ ಪೋರ್ಟಲ್ ತಿತಿತಿ.eshಡಿಚಿm.gov.iಟಿ ನಲ್ಲಿ ಸ್ವಯಂ ನೊಂದಣಿ ಮಾಡಿಕೊಳ್ಳಬಹುದು. ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಎಸ್.ಎಸ್.ಕೆ. ನಲ್ಲಿಯೂ ನೊಂದಣಿ ಮಾಡಿಕೊಳ್ಳಬಹುದು. ಸಿಎಸ್ಸಿ ಗಳಲ್ಲಿ ನೊಂದಣಿ ಉಚಿತವಾಗಿದ್ದು, ಗುರುತಿನ ಚೀಟಿ ಅಗತ್ಯವಿದ್ದಲ್ಲಿ 20 ರೂ. ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು. ಇದಕ್ಕಿಂತ ಹೆಚ್ಚಿನ ದರವನ್ನು ಯಾವುದೇ ಸಿಎಸ್ಸಿ ಗಳು ವಸೂಲಿ ಮಾಡುವಂತಿಲ್ಲ. ಈ ರೀತಿ ಪಡೆಯುವ ಗುರುತಿನ ಚೀಟಿಯು ದೇಶದಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ ಎಂದರು.
ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 5 ಲಕ್ಷ ನರೇಗಾ ಕೂಲಿ ಕಾರ್ಮಿಕರಿದ್ದಾರೆ. ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾ.ಪಂ. ಕಚೇರಿಯಲ್ಲಿಯೇ ಇ-ಶ್ರಮ ಪೋರ್ಟಲ್ನಲ್ಲಿ ಕಾರ್ಮಿಕರ ನೊಂದಣಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒ ಗಳಿಗೆ ನಿರ್ದೇಶನ ನೀಡಲಾಗುವುದು. ಅಲ್ಲದೆ ಕಾರ್ಮಿಕ ಇಲಾಖೆ ಜಿಲ್ಲೆಯ ವಿವಿಧೆಡೆ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರ ನೊಂದಣಿಗೆ ಕ್ರಮ ವಹಿಸಬೇಕು ಎಂದರು.
ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಅವರು ಮಾಹಿತಿ ನೀಡಿ, 2017-18 ರಲ್ಲಿ ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ ಸುಮಾರು 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗದಲ್ಲಿ ತೊಡಗಿಕೊಂಡಿದ್ದಾರೆ. ಕೇಂದ್ರೀಕೃತ ದತ್ತಾಂಶ ಅಲಭ್ಯತೆ ಕಾರಣ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗಗಳ ಸಮಸ್ಯೆಗಳ ನಿವಾರಣೋಪಾಯ ಕಲ್ಪಿಸುವುದು ಕಷ್ಟಸಾಧ್ಯವಾದ ಕಾರಣ, ಅಂತಹ ಕಾರ್ಮಿಕ ವರ್ಗದ ದತ್ತಾಂಶ ಸಂಗ್ರಹಿಸಿ, ಅವರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಿದ್ದಪಡಿಸಲು ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ ಇ-ಶ್ರಮ www.eshram.gov.in ಪೋರ್ಟಲ್ ಅಭಿವೃದ್ಧಿಪಡಿಸಿ, ಲೋಕಾರ್ಪಣೆಗೊಳಿಸಿದೆ. ಇದರಲ್ಲಿ ನೊಂದಣಿ ಮಾಡಿಸಿಕೊಂಡಲ್ಲಿ ಸಾಮಾಜಿಕ ಭದ್ರತೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ