ದಾವಣಗೆರೆ: ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ವೀರಾಚಾರಿ, ಮಿಟ್ಲಕಟ್ಟೆಯಲ್ಲಿ ಪಡಿತರ ವಿತರಣೆಯ ಪರವಾನಿಗೆ ಪಡೆದಿರುವ ಸಿದ್ದರಾಮಪ್ಪ ಕಳೆದ 20 ತಿಂಗಳಿನಿಂದ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಸರ್ಕಾರ ಬಡ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ಉಚಿತ ಅಕ್ಕಿ ವಿತರಿಸುತ್ತಿದೆ. ಆದರೆ, ಇದರ ವಿತರಣೆ ಜವಾಬ್ದಾರಿ ಹೊಂದಿರುವ ಸಿದ್ದರಾಮಪ್ಪ ಎಂಬುವರು ಪಡಿತರ ಫಲಾನುಭವಿಗಳಿಗೆ ವಿತರಿಸುವ ಅಕ್ಕಿಯ ತೂಕದಲ್ಲಿ ಕಡಿಮೆ ಕೊಡುವ ಮೂಲಕ ಪ್ರತಿ ತಿಂಗಳು ಬಡವರಿಗೆ ಸೇರಬೇಕಾಗಿರುವ 15 ಕ್ವಿಂಟಲ್ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಮರ್ಪಕ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗೇಂದ್ರಪ್ಪ, ಮನೋಜ್, ಸಿ.ನಿಂಗಪ್ಪ, ಮಲ್ಲೇಶ್.ಎಚ್, ಮಂಜಪ್ಪ, ರಾಜಪ್ಪ, ಶಶಿಧರ, ಅಂಜಿನಪ್ಪ, ಮಂಜಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು



