ದಾವಣಗೆರೆ: ಹೋರಾಟಗಾರರೂ ಸೇರಿದಂತೆ ಯಾರೂ ಚುನಾವಣಾ ರಾಜಕೀಯದಿಂದ ವಿಮುಖರಾಗಬಾರದು. ಚುನಾವಣೆಯ ಮೂಲಕವೇ ಜನವಿರೋಧಿಗಳಿಗೆ ಪಾಠ ಕಲಿಸಬೇಕು. ಹೀಗಾಗಿ ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನಾ ಭಾರತ್ ಮೋರ್ಚಾ ಮತ್ತು ಪ್ರಗತಿಪರ ಒಕ್ಕೂಟಗಳ ಯಾವುದೇ ಸದಸ್ಯರು ಚುನಾವಣಾ ಕಣಕ್ಕೆ ಇಳಿದರೆ ನಾವು ಬೆಂಬಲಿಸುತ್ತೇವೆ ಎಂದು ಅಪ್ನಾ ಭಾರತ್ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಅಶೋಕ್ ತನ್ವರ್, ರಾಜ್ಯ ಸಂಚಾಲಕ ಪ್ರಕಾಶ್ ಕಮ್ಮರಡಿ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಆಮಿಷ, ಜಾತಿ ರಾಜಕಾರಣ ಮಾಡಿಕೊಂಡು ಬಂದಿವೆ. ಅದಕ್ಕಿಂತ ಭಿನ್ನವಾಗಿ ರಾಜಕೀಯವಾಗಿ ಯೋಚಿಸುವ ಕ್ರಿಯೆಯನ್ನು ಅಪ್ನಾ ಭಾರತ್ ಮೋರ್ಚಾ ಮಾಡಲಿದೆ. ಸಂವಿಧಾನದ ಎಲ್ಲ ಆಶಯಗಳನ್ನು ಇಟ್ಟುಕೊಂಡು ಗುರುತಿಸುವಿಕೆ, ಬಹುತ್ವ ಮತ್ತು ಗೌರವ ಎಂಬ ಮೂರಂಶಗಳನ್ನು ಸೇರಿಸಿಕೊಂಡು ಅಪ್ನಾ ಭಾರತ್ ಮೋರ್ಚಾ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಲಿದೆ ಎಂದು ತಿಳಿಸಿದರು.
ಚಳವಳಿ, ಹೋರಾಟಗಳಷ್ಟೇ ಗುರಿ ಸಾಧಿಸಲು ಸಾಕಾಗುವುದಿಲ್ಲ. ಇದರ ಜತೆ ರೈತರ, ಜನಸಾಮಾನ್ಯರ, ಹೋರಾಟಗಾರರ ಆಶಯಗಳನ್ನು ಜಾರಿ ಮಾಡುವ ಸರ್ಕಾರವೂ ಇರಬೇಕು. ಅದಕ್ಕೆ ಚುನಾವಣಾ ರಾಜಕೀಯ ಅಗತ್ಯ. ಈಗ ಆಡಳಿತ ನಡೆಸುತ್ತಿರುವ ಸರ್ಕಾರಗಳ ಬಗ್ಗೆ ಜನರಿಗೆ ಇರುವ ನೋವು, ಆಕ್ರೋಶಗಳು ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರ ತೇಜಸ್ವಿ ವಿ.ಪಟೇಲ್, ನವದೆಹಲಿಯ ಜಾಮೀಯಾ ಮಿಲಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಕೆ.ಗಿರಿ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ, ಪ್ರಗತಿಪರ ಹೋರಾಟಗಾರ ಅನೀಸ್ ಪಾಷ, ಅಂಜನಪ್ಪ ಇದ್ದರು.



