ದಾವಣಗೆರೆ: ಸಾರ್ವಜನಿಕರು ಕಾನೂನು ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಮತ್ತು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಮಾರ್ಚ್ 14 ರಂದು ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಡಿ.ಕೆ. ವೇಲಾ ತಿಳಿಸಿದರು.
ಮಾರ್ಚ್ 11 ರಂದು ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್ನ ವಿಶೇಷತೆ ಮತ್ತು ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಆನ್ಲೈನ್ ಮೂಲಕ ಯಶಸ್ವಿ ಇತ್ಯರ್ಥ
ಚನ್ನಗಿರಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಮುಖ ಎಂ.ವಿ.ಸಿ ಪ್ರಕರಣವೊಂದನ್ನು ಇತ್ತೀಚೆಗೆ ಆನ್ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಮಾ ಕಂಪನಿ ಮತ್ತು ಅರ್ಜಿದಾರರ ನಡುವೆ ಸಂಧಾನ ವಕೀಲರು ನಡೆಸಿ, ರೂ.7.50 ಲಕ್ಷ ರೂಪಾಯಿಗಳ ಪರಿಹಾರ ಮೊತ್ತದೊಂದಿಗೆ ಯಶಸ್ವಿಯಾಗಿ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇದು ಜಿಲ್ಲೆಯಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ನಡೆದ ಮೊದಲ ಯಶಸ್ವಿ ಸಂಧಾನ ಪ್ರಕರಣವಾಗಿದೆ ಎಂದರು.
ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ; ದಾವಣಗೆರೆ ಕೆ.ಎಂ. ಸುರೇಶ್ ಬಿಜೆಪಿ ಅಭ್ಯರ್ಥಿ
ಲೋಕ್ ಅದಾಲತ್ ನಲ್ಲಿ ಬ್ಯಾಂಕ್ ವ್ಯವಹಾರಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ , ಭೂಸ್ವಾಧೀನ ಪರಿಹಾರ, ವಿಮಾ ಪ್ರಕರಣಗಳು, ಕೌಟುಂಬಿಕ ಕಲಹಗಳು ಹಾಗೂ ಆಸ್ತಿ ವಿಭಜನೆಗೆ ಸಂಬಂಧಿಸಿದ ಸಿವಿಲ್ ಪ್ರಕರಣಗಳನ್ನು ಈ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ಪೊಲೀಸ್ ಇಲಾಖೆಯ ಸಹಕಾರ
ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಮತ್ತು ಅವರ ತಂಡವು ರಾಜಿ ಮಾಡಿಕೊಳ್ಳಬಹುದಾದ ಸುಮಾರು 5,000 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಒಪ್ಪಿಕೊಂಡಿದ್ದಾರೆ. ಮಾರ್ಚ್ 14 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದ ಕಕ್ಷಿದಾರರು ಆನ್ಲೈನ್ ಮೂಲಕವೂ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರತಿ ತಾಲ್ಲೂಕು ನ್ಯಾಯಾಲಯಗಳಲ್ಲೂ ಇಮೇಲ್ ಮತ್ತು ವಿ.ಸಿ ಸೌಲಭ್ಯ ಒದಗಿಸಲಾಗಿದೆ ಎಂದರು.
ಲೋಕ್ ಅದಾಲತ್ ಯಶಸ್ಸಿಗೆ ಜಿಲ್ಲಾ ವಕೀಲರ ಸಂಘವು ಪೂರ್ಣ ಸಹಕಾರ ನೀಡುತ್ತಿದ್ದು, ಕಕ್ಷಿದಾರರಿಗೆ ರಾಜಿ ಸಂಧಾನದ ಮಹತ್ವವನ್ನು ತಿಳಿಹೇಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದ ಅವರು ಲೋಕ್ ಅದಾಲತ್ನಲ್ಲಿ ಪ್ರಕರಣಗಳು ಇತ್ಯರ್ಥವಾಗುವುದರಿಂದ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುತ್ತದೆ. ಇಲ್ಲಿ ನೀಡಲಾಗುವ ತೀರ್ಪು ಅಂತಿಮವಾಗಿದ್ದು, ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಂಡು ದೀರ್ಘಕಾಲದ ವ್ಯಾಜ್ಯಗಳಿಂದ ಮುಕ್ತಿ ಪಡೆಯಬೇಕು ಎಂದು ನ್ಯಾಯಾಧೀಶರು ಕರೆ ನೀಡಿದರು.
ಶೀಘ್ರ ನ್ಯಾಯದಾನಕ್ಕೆ ‘ಮಧ್ಯಸ್ಥಿಕೆ’ (Mediation) ಉತ್ತಮ ಮಾರ್ಗ: ನ್ಯಾಯಾಲಯಗಳಲ್ಲಿ ವರ್ಷನುಗಟ್ಟಲೆ ನಡೆಯುವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಉಭಯ ಪಾರ್ಟಿದಾರರಿಗೂ ಸಮಾಧಾನವಾಗುವಂತೆ ಇತ್ಯರ್ಥಪಡಿಸಿಕೊಳ್ಳಲು ‘ಮಧ್ಯಸ್ಥಿಕೆ’ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 89ರ ಅಡಿಯಲ್ಲಿ ತರಲಾದ ತಿದ್ದುಪಡಿಯ ಮಹತ್ವವನ್ನು ವಿವರಿ,. ಈ ತಿದ್ದುಪಡಿಯಂತೆ, ಪ್ರತಿಯೊಂದು ಸಿವಿಲ್ ಪ್ರಕರಣವನ್ನೂ ಕಡ್ಡಾಯವಾಗಿ ಮಧ್ಯಸ್ಥಿಕೆಗೆ ಒಪ್ಪಿಸಲಾಗುತ್ತಿದೆ.
ಲೋಕ ಅದಾಲತ್ಗಿಂತ ಭಿನ್ನವಾಗಿ, ಇಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅನುಮೋದನೆ ಪಡೆದ, ಸುಮಾರು 15 ವರ್ಷಗಳ ವಕೀಲಿಕೆ ಅನುಭವ ಹೊಂದಿದ ವಕೀಲರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗುತ್ತದೆ. ಮಧ್ಯಸ್ಥಿಕೆದಾರರು ಯಾವುದೇ ತೀರ್ಪು ನೀಡುವುದಿಲ್ಲ. ಬದಲಾಗಿ, ಉಭಯ ಪಕ್ಷಗಳ ನಡುವೆ ಸೌಹಾರ್ದಯುತ ಮಾತುಕತೆಗೆ ವೇದಿಕೆ ಕಲ್ಪಿಸುತ್ತಾರೆ. ಇಲ್ಲಿ ಹಂಚಿಕೊಳ್ಳುವ ಮಾಹಿತಿಯು ಅತ್ಯಂತ ಗೌಪ್ಯವಾಗಿರುತ್ತದೆ ಎಂದರು.
ಲೋಕ ಅದಾಲತ್ ಅಥವಾ ಮಧ್ಯಸ್ಥಿಕೆಯಲ್ಲಿ ಆದ ಸಂಧಾನವು ಅಂತಿಮವಾಗಿರುತ್ತದೆ. ಇದರ ಮೇಲೆ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಇದು ಸಮಯ ಮತ್ತು ಹಣವನ್ನು ಉಳಿಸುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ 36 ಮಂದಿ ಅನುಭವಿ ಮಧ್ಯಸ್ಥಿಕೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಈ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ನ್ಯಾಯಧೀಶರು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಜಿಲ್ಲಾ ನ್ಯಾಯಾಧೀಶರ ಮಾರ್ಗದರ್ಶನದಂತೆ ಜಿಲ್ಲೆಯನ್ನು ‘ಮಾದರಿ ಜಿಲ್ಲೆ’ಯನ್ನಾಗಿ ಮಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪೆÇಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 4,000 ಪ್ರಕರಣಗಳನ್ನು 90 ದಿನಗಳ ಒಳಗೆ 1,000ಕ್ಕೆ ಇಳಿಸಲಾಗಿದೆ. ಜಿಲ್ಲಾಧಿಕಾರಿಗಳ ಕೋರ್ಟ್ನಲ್ಲಿದ್ದ 400ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈಗ ಕೇವಲ 36 ಪ್ರಕರಣಗಳು ಮಾತ್ರ ಬಾಕಿ ಇವೆ ಎಂದರು.
ಪಹಣಿ ತಿದ್ದುಪಡಿ: ಮೃತರ ಹೆಸರಿನಲ್ಲಿದ್ದ ಸುಮಾರು 36,000 ಪಹಣಿಗಳಲ್ಲಿ ಈಗಾಗಲೇ 23,000 ಪಹಣಿಗಳನ್ನು ವಾರಸುದಾರರ ಹೆಸರಿಗೆ (ಪೌತಿ ಖಾತೆ) ವರ್ಗಾಯಿಸಲಾಗಿದೆ. ಉಳಿದ 10,000 ಪಹಣಿಗಳನ್ನು ಶೀಘ್ರವೇ ಸರಿಪಡಿಸಲಾಗುವುದು. ಹಲವು ವರ್ಷಗಳಿಂದ ಬಾಕಿ ಇದ್ದ ಜಂಟಿ ಖಾತೆಗಳನ್ನು ವಿಂಗಡಿಸಿ, ಸುಮಾರು 4,500 ಜನರಿಗೆ ಪ್ರತ್ಯೇಕ ಪಹಣಿ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿದ್ದ 13,000 ಜನರಿಗೆ ಇ-ಖಾತೆ ಮತ್ತು ಹಕ್ಕುಪತ್ರಗಳನ್ನು ನೀಡುವ ಮೂಲಕ ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಪೊಲೀಸ್ ಅಧೀಕ್ಷಕರಾದ ಡಾ; ಶೇಖರ್ ಹೆಚ್.ಟಿ. ಮಾತನಾಡಿ ರಾಜಿಯಾಗಬಲ್ಲ 770 ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ 407 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ. ಉಳಿದ 363 ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ದಂಡನೀಯ ಪ್ರಕರಣಗಳಾದ ಪೆಟ್ಟಿ ಕೇಸ್, ಐಎಂವಿ, ಕೋಟ್ಪಾ ಇತ್ಯಾದಿ ಸೇರಿ ಒಟ್ಟು 21,974 ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 21,911 ಪ್ರಕರಣಗಳಲ್ಲಿ ಈಗಾಗಲೇ ದಂಡ ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ. ಬಾಕಿ ಇರುವ 192 ಪ್ರಕರಣಗಳಿಗೆ ನೋಟಿಸ್ ನೀಡಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ.
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ 485 ಪ್ರಕರಣಗಳಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 360 ಪ್ರಕರಣಗಳನ್ನು ಈಗಾಗಲೇ ಕಾರ್ಯಗತ ಮಾಡಲಾಗಿದೆ. ಉಳಿದ 125 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಆರ್.ಗುರು ಬಸವರಾಜ್ ಮಾತನಾಡಿ ಜಿಲ್ಲೆಯಲ್ಲಿ ನಡೆಯಲಿರುವ ಲೋಕ ಅದಾಲತ್ ಮತ್ತು ರಾಜೀ ಸಂಧಾನ ಪ್ರಕ್ರಿಯೆಗೆ ಜಿಲ್ಲಾ ವಕೀಲರ ಸಂಘವು ತನ್ನ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರೆಣ್ಣವರ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 42,000 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ರಾಜಿಯಾಗಬಲ್ಲ ಶೇಕಡಾ 50ಕ್ಕೂ ಹೆಚ್ಚು ಸುಮಾರು 21,000 ರಿಂದ 22,000 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಸಾಧ್ಯತೆಗಳಿವೆ. ನ್ಯಾಯಾಧೀಶರು ಈಗಾಗಲೇ 10,674 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣಗಳೆಂದು ಗುರುತಿಸಿದ್ದಾರೆ. ಈವರೆಗೆ ಸುಮಾರು 3,802 ಪ್ರಕರಣಗಳಲ್ಲಿ ಉಭಯ ಪಕ್ಷಕಾರರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಮಧ್ಯಸ್ಥಗಾರ ವಕೀಲರಾದ ಅನ್ನಪೂರ್ಣ ಸೇರಿದಂತೆ ವಿವಿಧ ವಕೀಲರು ಈ ವೇಳೆ ಉಪಸ್ಥಿತರಿದ್ದರು.



