ದಾವಣಗೆರೆ: ಪಿಜೆ ಬಡಾವಣೆ ನಿವಾಸಿಗಳು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಬಡಾವಣೆಯಲ್ಲಿ 4.13 ಎಕರೆಯ ಯಾವುದೇ ಆಸ್ತಿ ವಕ್ಫ್ ಹೆಸರಿನಲ್ಲಿಲ್ಲ. ಚಾಲ್ತಿ ಪಹಣಿಯಲ್ಲಿ ವಕ್ಫ್ ಬದಲು ಸರ್ಕಾರಿ ಖರಾಬು ಎಂಬುದಾಗಿ ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ತಿಳಿಸಿದ್ದಾರೆ.
ನಗರದ ಪಿಜೆ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿ, ಪಿಜೆ ಬಡಾವಣೆಯ 4.13 ಎಕರೆ ವಕ್ಫ್ಗೆ ಸೇರಿದೆ ಎಂದು ಸುದ್ದಿ ಹರಡಿತ್ತು. ಇದೇ ವಿಚಾರವಾಗಿ ನಾವು ಸಭೆ ಮಾಡಿ, ಸ್ಪಷ್ಟನೆ ನೀಡಿದ್ದೆವು. ಇದೀಗ ಸರ್ಕಾರಿ ದಾಖಲೆಗಳಲ್ಲೇ ಅದು ಯಾರದ್ದೇ ಸ್ವತ್ತು ಅಲ್ಲ. ಜನರ ಆಸ್ತಿ ಎಂದು ನಮೂದಾಗಿದೆ. ಈ ಬಗ್ಗೆ ಸರ್ಕಾರಿ ದಾಖಲೆಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಕಾಳಜಿಯಿಂದಾಗಿ ಸರ್ವೇ ನಂಬರ್ ಸಹ ಬದಲಾಗಿದೆ.ಪಿಜೆ ಬಡಾವಣೆಯ 4.13 ಎಕರೆ ವಕ್ಫ್ಗೆ ಸೇರಿಲ್ಲ. ಹಿಂದೆ ದಾಖಲೆಗಳಲ್ಲಿ ಇದ್ದಂತಹ ಸರ್ವೇ ನಂಬರ್ ಸಹ ಬದಲಾಗಿದ್ದು, ಚಾಲ್ತಿ ಪಹಣಿಯಲ್ಲಿ ಸರ್ಕಾರಿ ಖರಾಬು ಎಂಬುದಾಗಿ ತಿದ್ದುಪಡಿಯಾಗಿದೆ ಎಂದರು.



