ದಾವಣಗೆರೆ: ಜನನ ಹಾಗೂ ಮರಣ ನೋಂದಣಾ ಮತ್ತು ಉಪನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನಗಳೊಳಗಾಗಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಹಾಗೂ ಕೃಷಿ ಅಂಕಿ ಅಂಶಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ ಮತ್ತು ಮರಣ ನೋಂದಣಿ ಮಾಡುವ ಸಮಯದಲ್ಲಿ ಮರಣ ದಿನಾಂಕ ಹಾಗೂ ನೋಂದಣಿ ಘಟಕವನ್ನು ತಪ್ಪಾಗಿ ಆಯ್ಕೆ ಮಾಡುತ್ತಿರುವುದು. ಮತ್ತು ಬೇರೆಯವರ ಆಧಾರ್ ಜೋಡಣೆ ಮಾಡಿ ಮರಣ ಪ್ರಮಾಣ ವಿತರಿಸುತ್ತಿರುವುದು ಕಂಡು ಬಂದಿದ್ದು, ಈ ರೀತಿಯ ತಪ್ಪುಗಳು ಇನ್ನೂ ಮುಂದೆ ಆಗದಂತೆ ಎಚ್ಚರವಹಿಸಿ ಕೆಲಸ ನಿರ್ವವಹಿಸಬೇಕು ಎಂದು ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಜನವರಿ 2024 ರಿಂದ ಸೆಪ್ಟಂಬರ್ 2024 ರವರೆಗೆ ಜನನ 4744, ಮರಣ 4985 ಒಟ್ಟು 9729 ಆಗಿರುತ್ತದೆ ಎಂದು ಜಿಲ್ಲಾ ಸಂಖ್ಯಿಕ ಅಧಿಕಾರಿ ನೀಲಾ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.