ದಾವಣಗೆರೆ: ಪ್ರಸಕ್ತ ಸಾಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಪ್ರವರ್ಗ-1 ವಿದ್ಯಾರ್ಥಿಗಳಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ನ.21 ಕೊನೆಯ ದಿನಾಂಕವಾಗಿದೆ. 01 ರಿಂದ 10ನೇ ತರಗತಿಯವರಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಆನ್ಲೈನ್ನಲ್ಲಿ www.ssp.karnataka.gov.in/8080/2122ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿವೇತನ ಸೌಲಭ್ಯದ ವಿವರ: ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗದ 1 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.2000 ವಿದ್ಯಾರ್ಥಿವೇತನ ನೀಡಲಾಗುವುದು ಮತ್ತು ರಾಜ್ಯದ ಇತರೆ ವರ್ಗದ 1 ರಿಂದ 5 ತರಗತಿ ವಿದ್ಯಾರ್ಥಿಗಳಿಗೆ ರೂ.250, ಅಡ್ಹಾಕ್ ಗ್ರಾಂಟ್ನಲ್ಲಿ ರೂ.500 ಸೇರಿದಂತೆ ಒಟ್ಟು ರೂ.750, 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ರೂ.400, ಅಡ್ಹಾಕ್ ಗ್ರಾಂಟ್ನಲ್ಲಿ ರೂ.500 ಸೇರಿದಂತೆ ಒಟ್ಟು ರೂ.900 ಹಾಗೂ 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೂ.500, ಅಡ್ಹಾಕ್ ಗ್ರಾಂಟ್ನಲ್ಲಿ ರೂ.500 ಸೇರಿದಂತೆ ಒಟ್ಟು ರೂ.1000 ವಿದ್ಯಾರ್ಥಿವೇತನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಸ್ಯಾಟ್ಸ್-ಐಡಿ (ಸ್ಯಾಟ್ಸ್-ಐಡಿ ತಿಳಿಯಲು ವೆಬ್ ವಿಳಾಸ : http://sts.karnataka.gov.in). ವಿದ್ಯಾರ್ಥಿ ಆಧಾರ್ ಸಂಖ್ಯೆ, ಪೋಷಕರ ಆಧಾರ್ ಸಂಖ್ಯೆ, ಜಾತಿ ಪ್ರಮಾಣದ ಪತ್ರದ ಆರ್.ಡಿ. ಸಂಖ್ಯೆ, ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ, ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಲ್ಲಿ, ವಿದ್ಯಾರ್ಥಿ ನಿಲಯ ಪ್ರವೇಶ ಸಂಖ್ಯೆ, ಆಧಾರ್ ಸಂಖ್ಯೆ ಇಲ್ಲದಿದ್ದಲ್ಲಿ, ಆಧಾರ್ ನೊಂದಣಿ ಮಾಡಿಸಿದ, ಇ.ಐ.ಡಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ ಸಂಖ್ಯೆ, ಬ್ಯಾಂಕಿನ ವಿಳಾಸ, ಪೋಷಕರ ಆಧಾರ್ ನಂಬರ್ಗೆ ಲಿಂಕ್ ಮಾಡಿರುವ ಮೊಬೈಲ್ ನಂ ಹಾಗೂ ಭೌತಿಕ ಅನುಮತಿ ಪತ್ರ ಅಗತ್ಯವಿರುತ್ತದೆ.
ಅರ್ಜಿ ಸಲ್ಲಿಸಲು ಅಲೆಮಾರಿ, ಅರೆ ಅಲೆಮಾರಿ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷ, ಪ್ರವರ್ಗ-1 ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವೇತನ ರೂ.01 ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವೇತನ ರೂ. 44,500 ಮಿತಿಯಲ್ಲಿರಬೇಕು.
ಫಲಾನುಭವಿಯು ರಾಜ್ಯ ಸರ್ಕಾರವು ಅಧಿಸೂಚಿಸಿರುವ ಪ್ರವರ್ಗ-1, 2ಎ, 3ಎ ಮತ್ತು 3ಬಿ ಹಾಗೂ ಕೇಂದ್ರ ಸರ್ಕಾರವು ಅಧಿಸೂಚಿಸಿರುವ ಇತರೆ ಹಿಂದುಳಿದ ವರ್ಗಗಳಡಿ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ. ಪ್ರವರ್ಗ-1 ಮತ್ತು ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳಿಗೆ ಸೇರಿದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದು. ನಂತರ ಇನ್ನುಳಿದ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಮೆರಿಟ್ ಆಧಾರದ ಮೇಲೆ ರಾಜ್ಯ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುವುದು.
ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಥವಾ ವೆಬ್ಸೈಟ್: www.backwardclasses.kar.nic.in ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.