ದಾವಣಗೆರೆ: ನಾನು ಎಂಎ, ಪಿಹೆಚ್ಡಿ ಮಾಡಿದ್ದೇನೆ. ಆದರೆ, ನನ್ನ ಜಾತಿ ನನ್ನ ಬಿಟ್ಟು ಹೋಗಿಲ್ಲ. ನಾವು ಬದಲಾಗದಿದ್ದರೆ ಮುಂದೆಯೂ ಗ್ರಾಮಗಳ ಹೊರಗೆ ಇರಬೇಕಾಗುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಛಲವಾದಿ ಮಹಾ ಸಭೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪರಮೇಶ್ವರ್ ಬುದ್ಧಿವಂತ. ಆದರೆ, ಎಸ್ಸಿಗೆ ಸೇರಿದ್ದಾನೆ. ಜಾತಿ ಇಲ್ಲದಿದ್ದರೆ ಎಲ್ಲೋ ಹೋಗುತ್ತಿದ್ದ ಎನ್ನುತ್ತಾರೆ. ಹೀಗಾಗಿ ಜಾತಿ ನಾಶ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಎಡ, ಬಲ ಹೀಗೆ ಹತ್ತಾರು ಗುಂಪುಗಳನ್ನಾಗಿ ಮಾಡಿದ್ದಾರೆ. ಈ ಜನ್ಮದಲ್ಲಿ ಒಂದಾಗದ ರೀತಿಯಲ್ಲಿ ಒಡೆದು ಹಾಕಿದ್ದಾರೆ ಎಂದಿದ್ದಾರೆ.
ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ವಾಲ್ಮೀಕಿ ನಿಗಮ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಎಸ್ಐಟಿ ಮಾಡಿದೆ, ಈಗ ಸಿಬಿಐ, ಇಡಿ ತನಿಖೆ ಮಾಡುತ್ತಿದೆ. ಅವ್ಯವಹಾರ ಆಗಿದ್ದರೆ ಸೂಕ್ತ ಕ್ರಮ ಆಗುತ್ತದೆ. ಆದರೆ ಮುಡಾದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸತ್ಯಾಂಶ ತಿಳಿಯಲು ಸಿಎಂ ನ್ಯಾ.ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದಾರೆ. ಬಿಜೆಪಿಯವರು ಪಾದಯಾತ್ರೆ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಪರಿಶಿಷ್ಟರ ಹಣ ದುರ್ಬಳಕೆ ಸುಳ್ಳು ಆರೋಪ. ಎಸ್ಸಿ, ಎಸ್ಟಿ ಜಾತಿಯ ಜನ ಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಲಾಗಿದೆ. ಈ ಹಣ ಗ್ಯಾರಂಟಿ ಯೋಜನೆ ಬಳಸಲಾಗಿದೆ ಎನ್ನಲಾಗಿದೆ. ಗ್ಯಾರಂಟಿಯಲ್ಲಿ ಶೇಖಡವಾರು ಆ ಜನ ಬರುತ್ತಾರೆ. ಈ ವರ್ಷ ಬಳಕೆ ಆಗದೇ ಉಳಿದ ಹಣ ಮುಂದಿನ ವರ್ಷಕ್ಕೆ ವರ್ಗಾಯಿಸಲಾಗುವುದು. ಆದರೆ ಸುಳ್ಳು ಆರೋಪ ಮಾಡಲಾಗುತ್ತಿದೆ.
ಛಲವಾದಿ ಸಮಾಜ ಒನಕೆ ಓಬವ್ವನ ಹೆಸರಿನಲ್ಲಿ ಒಂದು ಸ್ಮರಣೋತ್ಸವ ಎಂಬ ದೊಡ್ಡ ಸಮಾವೇಶ ಮಾಡಲಾಗುದು. ಅದು ಇತಿಹಾಸದಲ್ಲಿ ಮರೆಯಲಾಗದ ಸಮಾವೇಶ ಆಗಬೇಕು. ಇಷ್ಟರಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು. ಬೆಂಗಳೂರು, ಚಿತ್ರದುರ್ಗ ಅಥವಾ ದಾವಣಗೆರೆ ಈ ಮೂರರಲ್ಲಿ ಒಂದು ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.