ದಾವಣಗೆರೆ: ಕಂಠಪೂರ್ತಿ ಕುಡಿದ ಟ್ರ್ಯಾಕ್ಟರ್ ಚಾಲಕನೊಬ್ಬ ಕಾರು ಶೋರೂಮ್ ಬಳಿ ಸರ್ವೀಸ್ಗೆ ತಂದು ನಿಲ್ಲಿಸಿದ್ದ 5 ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ದಾವಣಗೆರೆ ಹೊರ ವಲಯದ ಟಾಟಾ ಮೋಟಾರ್ಸ್ನ ಶ್ರೀ ಆದಿಶಕ್ತಿ ಕಾರ್ ಶೋ ರೂಮ್ ಬಳಿ ನಡೆದಿದೆ.
ದಾವಣಗೆರೆ ತಾಲೂಕಿನ ಕರಿನಾಯ್ಕನಹಳ್ಳಿ ಗ್ರಾಮದ ರುದ್ರೇಶ ಕುಡಿದು ಟ್ರ್ಯಾಕ್ಟರ್ ಚಾಲನೆ ಮಾಡಿದ ಡ್ರೈವರ್. ಅಮಲಿನಲ್ಲಿಯೇ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಗ್ರಾಮದ ಕಡೆ ತೆರಳುತಗತಿದ್ದನು. ಈ ವೇಳೆ ರಸ್ತೆ ಪಕ್ಕದಲ್ಲಿಯೇ ನಿಲ್ಲಿಸಿದ್ದ ಕಾರುಗಳ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾನೆ. ನಾಲ್ಕೈದು ಕಾರುಗಳು ಜಖಂಗೊಂಡಿದ್ದು, ಶೋರೂಮ್ ಸಿಬ್ಬಂದಿ ಕುಡುಕನಿಗೆ ಧರ್ಮದೇಟು ನೀಡಿದ್ದಾರೆ.
ಬೆಳಗ್ಗೆ ಟ್ರ್ಯಾಕ್ಟರ್ ಸರ್ವೀಸ್ಗೆ ಬಂದಿದ್ದ ರುದ್ರೇಶ, ಮದ್ಯ ಸೇವನೆ ಮಾಡಿದ್ದಾನೆ. ಅಮಲಿನಲ್ಲಿಯೇ ರುದ್ರೇಶ ಟ್ರ್ಯಾಕ್ಟರ್ ಪಡೆದು, ಕರಿನಾಯ್ಕನಹಳ್ಳಿಗೆ ವಾಪಸಾಗಲು ಹೊರಟಿದ್ದಾನೆ. ಬಿರುಬಿಸಿಲಿನಲ್ಲಿ ಅಮಲು ಹೆಚ್ಚಾಗಿ, ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಸಾಲು ಸಾಲಾಗಿ ನಿಲ್ಲಿಸಿದ್ದ ಹೊಸ ಕಾರುಗಳು, ಸರ್ವೀಸ್ಗೆ ಬಂದಿದ್ದ ಕಾರುಗಳಿಗೆ ಟ್ರ್ಯಾಕ್ಟರ್ ಗುದ್ದಿಸಿದ್ದಾನೆ.5 ಕಾರುಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಅಮಲಿನಲ್ಲಿ ತೇಲಾಡುತ್ತಿದ್ದ. ಪೊಲೀಸರು ಸ್ಥಳಕ್ಕೆ ಬಂದು ವಶಕ್ಕೆ ಪಡೆದರು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ 2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.



