ದಾವಣಗೆರೆ: ಕಳೆದ ಒಂದು ತಿಂಗಳಿಂದ ಜನರ ಆತಂಕಕ್ಕೆ ಕಾರಣವಾಗಿದ್ದ ಕರಡಿಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಳೆದೇವರ ಹೊನ್ನಾಳಿ ಗ್ರಾಮದಲ್ಲಿರುವ ದೇವಸ್ಥಾನ ಪಕ್ಕದ ಪೊದೆಯಲ್ಲಿ ಅವಿತು ಕುಳಿತಿದ್ದ ಕರಡಿಯನ್ನು ಪ್ರಾದೇಶಿಕ ಅರಣ್ಯ ವಲಯ ಸಿಬ್ಬಂದಿ ಹಿಡಿದು ಭದ್ರಾವತಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕರಡಿಯು ಗ್ರಾಮದ ಸಣ್ಣಬೀರಪ್ಪ ದೇವಸ್ಥಾನ ಸುತ್ತಲಿನ ಪೊದೆಯಲ್ಲಿದ್ದು, ಹೊಲಗದ್ದೆಗೆ ಹೋಗುವವರಿಗೆ ಮಾಡುವವರಿಗೆ ಮತ್ತು ದೇವಸ್ಥಾನಕ್ಕೆ ಭಕ್ತರಿಗೆ ತೊಂದರೆ ಕೊಡುತ್ತಿತ್ತು. ಸ್ಥಳೀಯರು ಚನ್ನಗಿರಿ ತಾಲ್ಲೂಕಿನ ಆರ್ಎಫ್ಒ ಗಮನಕ್ಕೆ ತಂದ ನಂತರ, ಕರಡಿ ಸೆರೆ ಹಿಡಿಯಲು ಬೋನು ಇರಿಸಲಾಗಿತ್ತು. ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿದ್ದರಿಂದ ಪೊದೆಯಿಂದ ಹೆದರಿ ಹೊರಬಂದ ಕರಡಿ ಬಲೆಯೊಳಗೆ ಸಿಕ್ಕಿ ಬಿದ್ದಿದೆ.



