ದಾವಣಗೆರೆ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಬಜೆಟ್ನಲ್ಲಿ 1,500 ಕೋಟಿ ಅನುದಾನ ಮೀಸಲಿಡಬೇಕು ಎಂದು ನಿಗಮದ ಅಧ್ಯಕ್ಷ ಹನುಮಂತಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮಕ್ಕೆ ರಾಜ್ಯ ಬಜೆಟ್ನಲ್ಲಿ 1000 ಕೋಟಿ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆರ್ಥಿಕ ಆಯೋಗ 500 ಕೋಟಿ ರೂ. ಸೇರಿಸಿ ಒಂದೂವರೆ ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕರ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರದ ಸ್ಥಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಫಾಯಿ ಕರ್ಮಚಾರಿಗಳು ಒಂದು ದಿನ ತಮ್ಮ ಕಾಯಕ ನಿಲ್ಲಿಸಿದರೆ, ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗಿ ಹೋಗಲಿದೆ. ಈ ಕಾಯಕದಿಂದ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಕಳೆದ ಐದು ವರ್ಷದ ಹಿಂದೆ ಸರ್ಕಾರ ಈ ನಿಗಮ ಸ್ಥಾಪಿಸಿತು. ಆದರೆ 10, 20, 30 ಕೋಟಿ ರೂ. ಅನುದಾನ ನೀಡಿ ಕೈ ತೊಳೆದುಕೊಂಡಿತು. ಈ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಫಾಯಿ ಕರ್ಮಚಾರಿಗಳಿಗೆ ದೊರೆಯುವ ಸಾಲಸೌಲಭ್ಯ, ಭೂ ಒಡೆತನ ಯೋಜನೆಯಡಿ ಜಮೀನು, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ 60ಹೆಚ್ಚು ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಮಿಕರ ಸಾವು ಸಂಭವಿಸಿದೆ. ಪರಿಹಾರ ಸಿಕ್ಕಿದ್ದು ಕೇವಲ ಮೂರರಿಂದ ನಾಲ್ಕು ಜನಕ್ಕೆ ಮಾತ್ರ. ಇತ್ತೀಚಿಗೆ ಕಲಬುರ್ಗಿಯಲ್ಲಿ ಸಹ ಇಬ್ಬರು ಸಾವನ್ನಪ್ಪಿದ್ದಾರೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ರೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಊಟಕ್ಕೆ ತಟ್ಟೆ ಇಟ್ಟು ಊಟ ಬಡಿಸದೇ ಖಾಲಿ ತಟ್ಟೆಯಲ್ಲಿ ಕುಳಿತು ಕೊಳ್ಳುವ ಸ್ಥಿತಿ ದಲಿತರದ್ದಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಮಿಕರ ಬಗ್ಗೆ ನ್ಯಾಷನಲ್ ಲಾ ಕಾಲೇಜ್ ನಿಂದ ಬಳ್ಳಾರಿ ಮತ್ತು ಮೈಸೂರನಲ್ಲಿ ಸದ್ಯ ಸಮೀಕ್ಷೆ ನಡೆಯುತ್ತಿದೆ. ರಾಜ್ಯದಲ್ಲಿ ಮೂರು ಲಕ್ಷ ಜನಸಂಖ್ಯೆ ಇದ್ದು, ಈ ಬಗ್ಗೆ ಸಮಗ್ರ ಸಮೀಕ್ಷೆ ನಡೆದಿ ವರದಿ ನೀಡಲಿದೆ ಎಂದರು.
ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ, ಪೌರ ಕಾರ್ಮಿಕರ ಸಂಘದ ಎಲ್.ಎಂ.ಹನುಮಂತಪ್ಪ, ಸಫಾಯಿ ಕರ್ಮಚಾರಿಗಳ ಸಂಘದ ನೀಲಗಿರಿಯಪ್ಪ, ಶಂಕರ್, ನಿರಂಜನಮೂರ್ತಿ, ಬಿಜೆಪಿ ಮುಖಂಡ ಹನುಮಂತ ನಾಯ್ಕ, ಶಿವಾನಂದ ಮತ್ತಿತರರಿದ್ದರು.



