ದಾವಣಗೆರೆ: ಮುಖ್ಯ ಶಿಕ್ಷಕಿ-ಸಹ ಶಿಕ್ಷಕಿ ನಡುವಿನ ಜಗಳ ನಡೆದಿದ್ದು, ಮುಖ್ಯ ಶಿಕ್ಷಕಿ ಹೆಸರು ಕೆಡಿಸಲು ವಿದ್ಯಾರ್ಥಿನಿಯರಿಂದ ಉದ್ದೇಶಪೂರ್ವಕವಾಗಿ ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ಮಾಡಿ ವೈರಲ್ ಮಾಡಿದ ಸಹ ಶಿಕ್ಷಕಿ ಅಮಾನತು ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ತನಿಖೆ ನಡೆಸಿದ ಸಂದರ್ಭ ಉದ್ದೇಶಪೂರ್ವಕ ಕೃತ್ಯ ನಡೆಸಿರುವುದು ದೃಢಪಟ್ಟಿದೆ. ಹೀಗಾಗಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ತಾಲ್ಲೂಕಿನ ಮೆಳ್ಳೆಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಶಿಕ್ಷಕಿ ಸಿ.ಕೆ. ಸಾವಿತ್ರಮ್ಮ ಅಮಾನತು ಮಾಡಲಾಗಿದೆ. ಸಾವಿತ್ರಮ್ಮ ವಿಡಿಯೋವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.
ಶಿಕ್ಷಕಿ ಶಾಲೆ ಅವಧಿಯಲ್ಲಿ ಮೊಬೈಲ್ ಬಳಸುವುದು, ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕುಟುಂಬದವರಿಂದ ಮಾಡಿದ ಅರೋಪ ಮೇಲೆ ಮುಖ್ಯ ಶಿಕ್ಷಕಿ ಎ.ಶೋಭಾ ಅವರು, ಶಿಕ್ಷಕಿ ಸಾವಿತ್ರಮ್ಮ ಅವರಿಗೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿದ್ದರು. ಈ ಕಾರಣಕ್ಕೆ ಮುಖ್ಯಶಿಕ್ಷಕಿ ಸಹ ಶಿಕ್ಷಕಿ ನಡುವೆ ಜಗಳ ನಡೆದಿತ್ತು.
ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು, ಎಸ್ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದಾಗ, ಶಿಕ್ಷಕಿ ಸಾವಿತ್ರಮ್ಮ ಅವರೇ ಶೌಚಾಲಯ ಸ್ವಚ್ಛಗೊಳಿಸಲು ತಿಳಿಸಿದ್ದರು ಎಂದು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದರು. ನನ್ನ ಮೇಲಿನ ವೈಷಮ್ಯಕ್ಜೆ ಶಿಕ್ಷಕಿಯೇ ಈ ರೀತಿ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಶೋಭಾ ದೂರಿದ್ದಾರೆ.
ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸುವಂತೆ ಮುಖ್ಯ ಶಿಕ್ಷಕಿಯೇ ಸೂಚಿಸಿದ್ದರು. ಅವರೇ ಪೊರಕೆ, ಸೋಪಿನಪುಡಿ ತರಿಸಿದ್ದರು. ಅವರ ಸೂಚನೆ ಮೇರೆಗೆ ಶೌಚಾಲಯ ಸ್ವಚ್ಛಗೊಳಿಸಲಾಗಿತ್ತು ಎಂದು ಶಿಕ್ಷಕಿ ಸಾವಿತ್ರಮ್ಮ ವಾದಿಸಿದ್ದರು. ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿ ಕರ್ತವ್ಯಲೋಪ ಎಸಗಿರುವ ಶಿಕ್ಷಕಿಯನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು ಅಮಾನತುಗೊಳಿಸಲಾಗಿದೆ ಎಂದು ಸುರೇಶ ಬಿ. ಇಟ್ನಾಳ್ ಸಿಇಒ ಜಿಲ್ಲಾ ಪಂಚಾಯಿತಿ ತಿಳಿಸಿದ್ದಾರೆ.



