ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಪುತ್ಥಳಿ ಸ್ಥಾಪನೆ ವಿಚಾರವಾಗಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ತೆರವುಗೊಳಿಸಲಾಯಿತು.
ಜಿಲ್ಲಾಡಳಿತ ಸೂಚನೆ ಮೆರೆಗೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ತೆರವುಗೊಳಿಸಲಾಯಿತು. ವಾಲ್ಮೀಕಿ ವೃತ್ತದಲ್ಲಿ ಅನಧಿಕೃತವಾಗಿ ರಾತ್ರೋ ರಾತ್ರಿ ರಾಯಣ್ಣ ಪುತ್ಥಳಿ ಸ್ಥಾಪಿಸಿದ್ದರಿಂದ ನಾಯಕ ಸಮಾಜದವರು ಕಳೆದ 15 ದಿನದಿಂದ ಪ್ರತಿಭಟನೆ, ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ಪುತ್ಥಳಿ ತೆರವುಗೊಳಿಸಲಾಗಿದೆ.
ರಾಯಣ್ಣ ಮೂರ್ತಿ ತೆರವು ವಿರೋಧಿಸಿದ ಕುರುಬ ಸಮಾಜದವರು ಪೊಲೀಸರಿಗೆ ಧಿಕ್ಕಾರ ಕೂಗಿದರು. ಕುರುಬ ಸಮಾಜದವರು ಬೀರಲಿಂಗೇಶ್ವರ ದೇವಾಲಯದಲ್ಲಿ ಸಭೆ ಸೇರಿ ನಿಷೇಧಾಜ್ಞೆ ಮುಕ್ತಾಯದ ನಂತರ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಜಿಲ್ಲಾಡಳಿತ ಸೂಚನೆ ಮೇರೆಗೆ ಗ್ರಾಪಂ ಸಿಬ್ಬಂದಿ ರಾಯಣ್ಣ ಪುತ್ಥಳಿ ತೆರವುಗೊಳಿಸಿದರು.
ಈ ಹಿನ್ನೆಲೆಯಲ್ಲಿ ಭಾನುವಳ್ಳಿಯಲ್ಲಿ ಜ.25ರ ವರೆಗೆ ತಹಸೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆಂದು ಪಿಎಸ್ಐ ಪ್ರಭು ಕೆಳಗಿನಮನಿ ತಿಳಿಸಿದರು. ಸ್ಥಳದಲ್ಲಿ ಡಿವೈಎಸ್ಪಿ ಬಸವರಾಜ್, ವೃತ್ತ ನಿರೀಕ್ಷಕ ಸುರೇಶ್. ಗ್ರಾಮಲೆಕ್ಕಾಧಿಕಾರಿ ಶಿವಪ್ರಕಾಶ್, ಮೀಸಲು ಪೊಲೀಸ್ ಇದ್ದರು.



