ದಾವಣಗೆರೆ: ನಮ್ಮ ಆಹಾರದಲ್ಲಿ ಪ್ರತಿ ನಿತ್ಯ ಒಂದು ಸಿರಿಧಾನ್ಯವನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಎಂ.ಜಿ ಬಸವನಗೌಡ ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಲ್ಲಾಗಟ್ಟೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ “ಸಿರಿಧಾನ್ಯಗಳ ಮೌಲ್ಯವರ್ಧನೆಯ ಪ್ರಾಯೋಗಿಕ ತರಬೇತಿ” ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸ್ತುತ ಆಹಾರದಲ್ಲಿ ವಿಷ ಪೂರಿತ ಪದಾರ್ಥಗಳಾದ ಉಪ್ಪು, ಸಕ್ಕರೆ ಮತ್ತು ಮೈದಾಗಳ ಬಳಕೆಯಿಂದ ಮನುಷ್ಯರ ಆರೋಗ್ಯದಲ್ಲಿ ನಾನಾ ರೀತಿಯ ಏರುಪೇರುಗಳಾಗುತ್ತಿದ್ದು, ಭಾರತ ಮಧುಮೇಹಿಗಳ ರಾಜಧಾನಿಯಾಗುವತ್ತ ದಾಪುಗಾಲು ಇಡುತ್ತಿದೆ. ಆದುದರಿಂದ ಪ್ರತಿಯೊಬ್ಬರೂ ದಿನಕ್ಕೊಂದು ಸಿರಿಧಾನ್ಯವನ್ನು ಆಹಾರದಲ್ಲಿ ಬಳಸುವುದನ್ನು ಕಲಿಯಬೇಕು. ಸಿರಿಧಾನ್ಯಗಳನ್ನು ಮೌಲ್ಯವರ್ಧನೆ ಮಾಡಿ ಬಳಸುವುದು ಹಾಗೂ ಸಣ್ಣ ಉದ್ಯಮವನ್ನಾಗಿ ಪ್ರಾರಂಭಿಸುವುದರಿಂದ ಉತ್ತಮ ಆದಾಯ ಗಳಿಸಬಹುದೆಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಗತಿಪರ ರೈತ ಮಹಿಳೆ ಸರೋಜ ಪಾಟೀಲ್, ಸ್ರೀ ಶಕ್ತಿ ಸಂಘಗಳ ನೆರವಿನಿಂದ ಇಂದು ಸುಮಾರು 30ಕ್ಕೂ ಹೆಚ್ಚು ಸಿರಿಧಾನ್ಯಗಳ ಮೌಲ್ಯವರ್ಧಿತ ಪದಾರ್ಥ ಮಾಡಿ, ರಾಜ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಒದಗಿಸುತ್ತಿದ್ದೇನೆ. ಹಾಗೆಯೇ ಸಿರಿಧಾನ್ಯಗಳ ಮಿಶ್ರಿತ ಮಾಲ್ಟ್ ಪೌಡರ್ ತಯಾರಿಕೆ ಮತ್ತು ಬಳಸುವುದರ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ ನೆಡೆಸಿಕೊಟ್ಟರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವಂತ್ ಮಾತನಾಡಿ, ಇಂದು ವೈಯಕ್ತಿಕ ಸ್ವಚ್ಚತೆ ಮತ್ತು ಪರಿಸರ ಸ್ವಚ್ಚತೆಯಿಂದ ಉತ್ತಮ ಆರೋಗ್ಯ ಹೊಂದಬಹುದೆಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ಎಸ್.ಕೆ ಮಾತನಾಡಿ ಗ್ರಾಮದಲ್ಲಿ ಜನರ ಉತ್ತಮ ವೈಧ್ಯಕೀಯ ಸೌಲಭ್ಯಕ್ಕೆ ತಮ್ಮ ಕುಟುಂಬದಿಂದ ಪ್ರಾಥಮಿಕ ಆರೋಗ್ಯ ಕೇದ್ರದಲ್ಲಿ ಒದಗಿಸಿರುವ ಸೌಲಭ್ಯಗಳ ಸಂಪೂರ್ಣ ವಿವರಣೆ ನೀಡಿ ಅದರ ಸದುಪಯೋಗ ಪಡೆಯಬೇಕೆಂದು ಜನರಿಗೆ ಕರೆ ನೀಡಿದರು.
ಕೇಂದ್ರದ ವಿಸ್ತರಣಾ ತಜ್ಞ ರಘುರಾಜ ಮಾತನಾಡಿ ಬರುವ ತಿಂಗಳು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಖಾಧ್ಯ ಸ್ಪರ್ಧೆಯನ್ನು ಏರ್ಪಡಿಸಲಿದ್ದು ಹೆಚ್ಚು ಕುಟುಂಬಗಳು ಭಾಗವಹಿಸಬೇಕೆಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, 50ಕ್ಕೂ ಹೆಚ್ಚು ಕುಟುಂಬದವರು ಭಾಗವಹಿಸಿದ್ದರು.