ದಾವಣಗೆರೆ: ಜಿಲ್ಲೆಯಲ್ಲಿ 28 ಅಪಘಾತ ಸ್ಥಳಗಳಿದ್ದು, ಕೂಡಲೇ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾರನಾಡಿದರು. ಇದೇ ವೇಳೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆಸಿದ ಅಪಘಾತ ಸ್ಥಳಗಳ ಸಮೀಕ್ಷೆಯ ವರದಿ ಸಲ್ಲಿಸದರು.ಅಗತ್ಯವಿರುವ ಕಡೆಗಳಲ್ಲಿ ಒಂದು ವಾರದೊಳಗೆ ಬ್ಲಿಂಕರ್ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ನಗರದ ಹೊರ ವಲಯದಲ್ಲಿರುವ ಬಾಡಾಕ್ರಾಸ್ ಪ್ರದೇಶದಲ್ಲಿ ಸಂಚಾರಕ್ಕೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಲು ವಿವಿಧ ಇಲಾಖೆಯ ಅಧಿಕಾರಿಗಳ ತಂಡವೊಂದನ್ನು ರಚಿಸಬೇಕು.ಬಾಡಾ ಕ್ರಾಸ್ನಲ್ಲಿ 3 ಬಾರ್ಗಳು ಮತ್ತು ಮಾಂಸಾಹಾರದ ಹೋಟೆಲ್ಗಳಿವೆ. ಅಲ್ಲಿ ಫುಟ್ಪಾತ್ ಒತ್ತುವರಿಯಾಗಿದೆ. ಇದರಿಂದಾಗಿ ವಾಹನಗಳನ್ನು ರಸ್ತೆಯ ಮೇಲೆಯೇ ನಿಲ್ಲಿಸುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಂಚಾರ ಠಾಣೆಯ ಪೊಲೀಸ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಬೇಕು. ಸೂಕ್ತ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ರಸ್ತೆಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸದಿರುವುದು, ತಿರುವಿನಲ್ಲಿ ಗಿಡಗಳು ಬೆಳೆದಿರುವುದು, ಬಸ್ ನಿಲ್ದಾಣ ಇಲ್ಲದಿರುವುದು, ರಸ್ತೆಯ ಮಾರ್ಕಿಂಗ್ ಮಾಡದಿರುವುದು, ಸರ್ವೀಸ್ ರಸ್ತೆ ಇಲ್ಲದಿರುವುದು, ಸೇತುವೆ ಕಿರಿದಾಗಿರುವುದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದು, ರಿಫ್ಲೆಕ್ಟರ್ ಅಳವಡಿಸದಿರುವುದು, ಹೆದ್ದಾರಿ ಮೇಲೆ ನೀರು ನಿಲ್ಲುವುದು, ಎಲ್ಲೆಂದರಲ್ಲಿ ವಾಹನ ನಿಲುಗಡೆ ಹೀಗೆ ಅಪಘಾತಕ್ಕೆ ಇರುವ ಸಮಸ್ಯೆ ಪಟ್ಟಿ ಮಾಡಲಾಯಿತು.
ಪ್ರತಿ ದಿನ 200 ರಿಂದ 300 ಲಾರಿಗಳು ಬರುವುದರಿಂದ ಅವುಗಳ ನಿಲುಗಡೆಗೆ ಟ್ರಕ್ ಟರ್ಮಿನಲ್ ಅಗತ್ಯವಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಗಮನ ಸೆಳೆದರು
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ದೂಡಾ ಆಯುಕ್ತ ಬಸವನಗೌಡ ಕೋಟೂರ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ದೀಕ್ಷಿತ್, ಅಣ್ಣಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.



