ದಾವಣಗೆರೆ: ಕಳೆದ ತಿಂಗಳು ಬಿಟ್ಟು ಬಿಡದೇ ಸುರಿದ ಮಳೆ, ಇದೀಗ ಇದ್ದಕ್ಕಿಂದ 20 ದಿನದಿಂದ ಮಯವಾಗಿಬಿಟ್ಟಿದೆ. ಬಿತ್ತಿದ ಬೆಳೆ ಮಳೆ ಇಲ್ಲದೆ ಒಣಗುತ್ತಿದೆ. ಕಂಗಾಲದ ರೈತ ಒಣಗಿದ ಬೆಳೆ ನಾಶ ಮಾಡುತ್ತಿದ್ದಾರೆ.
ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳ್ಳಿ ಗ್ರಾಮದ ರೈತ ಬಾಬುಗೌಡ ಪಾಟೀಲ್ ಟ್ರ್ಯಾಕ್ಟರ್ನಿಂದ ಒಣಗಿದ ಬೆಳೆ ನಾಶಪಡಿಸಿದ್ದಾರೆ. ಬಿತ್ತಿನೆ ಮಾಡಿದ್ದ ಮೆಕ್ಕೆಜೋಳ ಬೆಳೆಗೆ ಮಳೆಯ ಅಭಾವದಿಂದ ಸಂಪೂರ್ಣ ಒಣಗಿದೆ. ಇದರಿಂದ ಬೇಸರಗೊಂಡು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡಿದ್ದಾರೆ.
ಬಾನುವಳ್ಳಿಯಲ್ಲಿ ಒಣಗಿದ ಮೆಕ್ಕೆಜೋಳದ ಹೊಲಕ್ಕೆ ರಾಜ್ಯ ರೈತ ಸಂಘ ಹಸಿರು ಸೇನೆಯ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಪ್ರಕಾಶ್ ಭೇಟಿ ನೀಡಿದರು. ಮೆಕ್ಕೆಜೋಳ ಫಸಲು ಮೊದಲು ಅತಿವೃಷ್ಟಿಯಿಂದ ಹಾಳಾಗಿತ್ತು. ಈಗ ಮಳೆಯ ಅಭಾವದಿಂದ ಒಣಗಿ ಹೋಗಿದೆ.ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗಿ ರೈತರು ಬೆಳೆ ನಾಶಪಡಿಸುತ್ತಿದ್ದಾರೆ. ಹೀಗಾಗಿ ಕೃಷಿ ಇಲಾಖೆ, ಸರ್ಕಾರ ರೈತರಿಗೆ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತರಾದ ಎನ್. ರಾಜಪ್ಪ, ಡಿ.ಜಿ. ಬಸವರಾಜಪ್ಪ, ಸಿದ್ದಪ್ಪ ಕರುಳೇರ, ಬಸವರಾಜ, ಕಾಳಪ್ಪ, ಗುಬ್ಬಿ ದೇವರಾಜ್ ಇದ್ದರು.