ದಾವಣಗೆರೆ: ಅಕ್ರಮವಾಗಿ ಗಾಂಜಾ ಸಾಗಟ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 3.20 ಲಕ್ಷ ಮೌಲ್ಯದ 3 ಕೆಜಿ 154 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ನ್ಯಾಮತಿ ಪೊಲೀಸ್ ಠಾಣಾ ಸರಹದ್ದಿನ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಬದಿಯಲ್ಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕೆಲವರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ರವಿ ಎನ್.ಎಸ್ ಪೊಲೀಸ್ ನಿರೀಕ್ಷಕರವರ ನೇತೃತ್ವದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಸಾಲುಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯ ಎಡಭಾಗದ ಕಾಡಿನಲ್ಲಿ ಕೆಲವು ಆಸಾಮಿಗಳು ಬೈಕ್ ಗಳನ್ನು ನಿಲ್ಲಿಸಿಕೊಂಡು ಕುಳಿತಿರುವುದು ಕಂಡುಬಂದಿರುತ್ತದೆ. ನಂತರ ಅವರುಗಳನ್ನು ಸುತ್ತುವರೆದಿದ್ದು, ಮೂರೂ ಕವರ್ ಗಳನ್ನು ತೆಗೆದು ಪರೀಶೀಲಿಸಿದ್ದು, ಅದರಲ್ಲಿ ಗಾಂಜಾ ಇರುವುದು ಕಂಡು ಬಂದಿರುತ್ತದೆ.
ಗಾಂಜಾ ಬಗ್ಗೆ ವಿಚಾರಿಸಲಾಗಿ ನಾವುಗಳು ಇದನ್ನು ಶಿವಮೊಗ್ಗದಿಂದ ತಂದಿದ್ದು, ನ್ಯಾಮತಿ, ಹೊನ್ನಾಳಿ ಭಾಗದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಯಾರಿ ನಡೆಸುತ್ತಿರುವದಾಗಿ ತಿಳಿಸಿರುತ್ತಾರೆ. ಆರೋಪಿಗಳಾದ 1)ಅರ್ಬಾಜ್ ಖಾನ್ (27) ಶಿವಮೊಗ್ಗ ಮ, 2) ಶಂಕರನಾಯ್ಕ (29)ಹೊಸಜೋಗ ಗ್ರಾಮ ನ್ಯಾಮತಿ ತಾಲ್ಲೂಕ್. 3) ಮಹಮ್ಮದ್ ಹುಸ್ನೈನ್ ರಝಾ ಯಾನೆ ಮುದಾಸೀರ್ (23)ವರ್ಷ ಶಿವಮೊಗ್ಗ ಟೌನ್ 4) ಜಾಫರ್ ಸಾದೀಖ್ (22) ಶಿವಮೊಗ್ಗ ಟೌನ್ ಹಾಗೂ 5) ಮಹಮ್ಮದ್ ರೂಹೀತ್ ಯಾನೆ ರೋಹಿತ್ ( 31) ರಾಮನಗರ ಗ್ರಾಮ, ಶಿವಮೊಗ್ಗ ತಾಲ್ಲೂಕ್ ಇವರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರಿಂದ 3 ಕೆಜಿ 154 ಗ್ರಾಂ (3154 ಗ್ರಾಂ)ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆಂದಾಜು ಬೆಲೆ 3,20,000/- ರೂ ಆಗುತ್ತದೆ. ಇವರಿಂದ ಮೂರು ಮೊಬೈಲ್ ಗಳನ್ನು ಮತ್ತು 2 ಬೈಕ್ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ಮತ್ತು ಪಿಎಸ್ಐ ಹೊಳಬಸಪ್ಪ ಹೊಳಿ, ಠಾಣೆ ಸಿಬ್ಬಂದಿ ಮಂಜಪ್ಪ, ಮಲ್ಲೇಶಪ್ಪ, ತೀರ್ಥಪ್ಪ, ವಿಕ್ರಮ್, ಚಂದ್ರಶೇಖರ, ನಾಗರಾಜನಾಯ್ಕ, ಶಿವರಾಜ್, ಆನಂದ, ಚನ್ನೇಶ ಅವರುಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



