ದಾವಣಗೆರೆ: ಹರಿಹರ ನಗರದ ತರಕಾರಿ ಮಾರುಕಟ್ಟೆಯಲ್ಲಿ ಖೋಟಾ ನೋಟು ಚಲಾವಣೆ ಮಾಡಿದ ಆರೋಪಿಗೆ ನ್ಯಾಯಾಲಯವು 5 ವರ್ಷ ಜೈಲು ಮತ್ತು 30 ಸಾವಿರ ದಂಡ ವಿಧಿಸಿದೆ.
ಫಕೃಸಾಬ್ ಎಂಬವರಿಂದ ತೆಂಗಿನ ಕಾಯಿ ಪಡೆದ ಹನುಮಂತಪ್ಪ ಖೋಟಾ ನೋಟು ನೀಡಿದ್ದರು. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರಿಗೆ ನ್ಯಾಯಾಲಯವು 5 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 30 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಚನ್ನಗಿರಿ ತಾಲ್ಲೂಕು ನವಿಲೇಹಾಳ್ ಗ್ರಾಮದ ಹನುಮಂತಪ್ಪ ಮತ್ತು ಆತನ ಹೆಂಡತಿ ಶಾಂತ ಎಂಬುಬವರು ತೆಂಗಿನ ಕಾಯಿ
ತೆಗೆದುಕೊಂಡು 2,000 ರೂ. ಮುಖ ಬೆಲೆಯ ನೋಟನ್ನು ನೀಡಿದ್ದು, ತೆಂಗಿನ ಕಾಯಿ ವ್ಯಾಪಾರಿಗೆ ಅನುಮಾನ ಬಂದಿದ್ದರಿಂದ ಬೇರೆ ನೋಟುಕೇಳದ್ದಾಗ 500 ರೂ. ಮುಖ ಬೆಲೆಯ ನೋಟನ್ನು ನೀಡಿದ್ದರು. ಅದೂ ಸಹ ಖೋಟಾನೋಟು ಎಂಬ ಅನುಮಾನದಿಂದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.
ಹರಿಹರದ ಸಿಪಿಐ ಐ.ಹೆಚ್. ಗುರುನಾಥ ಅವರು ತನಿಖೆ ನಡೆಸಿ, ಕೃತ್ಯಕ್ಕೆ ಉಪಯೋಗಿಸಿದ ಕಲರ್ ಜೆರಾಕ್ಸ್ ಪ್ರಿಂಟರ್ ಮತ್ತು ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡರು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಿದರು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಎನ್. ಪ್ರವೀಣಕುಮಾರ್ ಅವರು, ಆರೋಪ ಸಾಬೀತಾಗಿದ್ದರಿಂದ ಆರೋಪಿತರಿಗೆ 5 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಕೀಲ ಜಯ್ಯಪ್ಪ ನ್ಯಾಯ ಮಂಡನೆ ಮಾಡಿದ್ದರು.ತನಿಖಾಧಿಕಾರಿ ಐ.ಹೆಚ್. ಗುರುನಾಥ, ಸರ್ಕಾರಿ ವಕೀಲ ಜಯ್ಯಪ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ , ಎಎಸ್ಪಿಗಳಾದ ವಿಜಯಕುಮಾರ ಸಂತೋಷ ಮತ್ತು ಜಿ. ಮಂಜುನಾಥ ಶ್ಲಾಘಿಸಿದ್ದಾರೆ.



