ದಾವಣಗೆರೆ: ಅಸಲಿ ಬಂಗಾರವೆಂದು ನಂಬಿಸಿ ನಕಲಿ ಬಂಗಾರ ನೀಡಿ ವಂಚನೆ ಮಾಡುತ್ತಿದ್ದ ಅಂತರ್ ಜಿಲ್ಲಾ ಖತರ್ನಾಕ್ ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಂದ ಬರೋಬ್ಬರಿ 40 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಈ ವಂಚನೆ ಪ್ರಕರಣದಿಂದ ಪಾರು ಮಾಡಲು ದೇವರಿಗೆ 4.50 ಲಕ್ಷ ರೂಪಾಯಿ ಖರ್ಚು ಮಾಡಿ ವಿಶೇಷ ಪೂಜೆ ಮಾಡಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಉಮಾ ಪ್ರಶಾಂತ್ , ಆರೋಪಿಗಳು ಈ ವಂಚನೆ ಪ್ರಕಣದಲ್ಲಿ ಪೊಲೀಸರಿಗೆ ಸಿಗದಂತೆ ಪ್ರಾರ್ಥಿಸಿ ದೇವರ ಮೊರೆ ಹೋಗಿದಗದರು. ಇದಕ್ಕಾಗಿ ವಿಶೇಷ ಪೂಜೆ ಸಹ ಮಾಡಿಸಿದ್ದರು. ಇದಕ್ಕಾಗಿ 4.50 ಲಕ್ಷ ರೂಪಾಯಿ ಖರ್ಚು ಮಾಡಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಗೋವರ್ಧನ್ ಬಿ.ಆರ್ ಎಂಬುವರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪರಿಚಯ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿ ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ನಿಮಗೆ ಬೇಕಾದರೆ ಸ್ಯಾಂಪಲ್ ಕೋಡಿಸುತ್ತೆನೆ ಬಂದು ನೋಡಿಕೊಂಡು ಹೋಗಿ ಎಂದು ತಿಳಿಸಿದ್ದರು. ಇದನ್ನು ನಂಬಿದ ದೂರುದಾರ ಅವರ ಮಾತಿನಂತೆ ಹೇಳಿದ ಸ್ಥಳಕ್ಕೆ ಬಂದು ವಂಚಕರು ನೀಡಿದ ಅಸಲಿ ಬಂಗಾರ ಬಿಲ್ಲೆಗಳನ್ನು ಪಡೆದು ಪರಿಶಿಲಿಸಿದ್ದು, ನಂತರ ಅಸಲಿ ಬಂಗಾರ ಖಚಿತ ಪಡಿಸಿಕೊಂಡು ವ್ಯವಹಾರ ಮಾತನಾಡಿದ್ದು, 60 ಲಕ್ಷ ಪಡೆದು ಅಸಲಿ ಬಂಗಾರ ಎಂಬುದಾಗಿ ನಂಬಿಸಿ ನಕಲಿ ಬಂಗಾರ ನೀಡಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿತರು ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಮತ್ತು ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾದೀಕ್ಷಕರಾದ ಶ್ರೀ ಪ್ರಶಾಂತ್ ಮುನ್ನೋಳಿ ರವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಲ ನಿರಂಜನ ಬಿ. ನೇತೃತ್ವದದಲ್ಲಿ ಪಿ.ಎಸ್.ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚನೆ ಮಾಡಿದ್ದು, ಈ ತಂಡ ಆರೋಪಿಗಳಾದ 1) ಸಂದೀಪ ಪಿ ತಂದೆ ಲೇ|| ಪರಶುರಾಮ, ವಾಸ:- ಪಾವನಪುರ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. 2) ಈಶ್ವರಪ್ಪ ಹೆಚ್ ತಂದೆ ಲೇ|| ಕೊಟ್ರಬಸಪ್ಪ, ವಾಸ:- ಚಿರಸ್ಥಹಳ್ಳಿ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. ಇವರುಗಳನ್ನು ವಂಚನೆ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.
ಆರೋಪಿಗಳಿಂದ ಮನೆಯಲ್ಲಿ ಇಟ್ಟಿದ್ 40 ಲಕ್ಷ ರೂ. ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಮೇಲ್ಕಂಡ ವಂಚನೆ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.