ದಾವಣಗೆರೆ: ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಮದುವೆಯಾಗಿ ಕದ್ದುಮುಚ್ಚಿ ಓಡಾಡುತ್ತಿದ್ದ ಆರೋಪಿಯನ್ನು ಪತ್ನಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು, ನಡು ರಸ್ತೆಯಲ್ಲೇ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊಹಮ್ಮದ್ ವಾಸೀಂ ಅಲಿಯಾಸ್ ಸಲ್ಮಾನ್ ಖಾನ್ ಸಾದೀಕ್ ಎಂಬ ವ್ಯಕ್ತಿ ನಾಲ್ಕು ಮದುವೆ ಆಗಿ, ಪತ್ನಿಯರಿಂದ ಹಣ, ಚಿನ್ನಾಭರಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ದಾವಣಗೆರೆಯ ಆಜಾದ್ ನಗರದ ನಿವಾಸಿಯಾಗಿರುವ ಈತ, ವಿಧವೆಯರು ಹಾಗೂ ಗಂಡ ಬಿಟ್ಟು ಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ನಂಬಿಸಿ ಮದುವೆಯಾಗಿ ಮೋಸ ಮಾಡುತ್ತಿದ್ದನು. ಮದುವೆಯಾದ ಬಳಿಕ ಪತ್ನಿಯರಿಂದ ಚಿನ್ನ, ಹಣ ಪಡೆದು ವಂಚನೆ ಮಾಡಿದ್ದನು ಎಂದು ಪತ್ನಿಯರು ಆರೋಪಿಸಿದ್ದಾರೆ.
ಹರಿಹರದಲ್ಲಿ ಮೊದಲ ಮದುವೆ, ಮಲೇಬೆನ್ನೂರಿನಲ್ಲಿ ಎರಡನೇ ಮದುವೆ ಹಾಗೂ ದಾವಣಗೆರೆಯ ಆಜಾದ್ ನಗರದಲ್ಲಿ ಮೂರನೇ ಹಾಗೂ ಭಾಷಾ ನಗರದಲ್ಲಿ ನಾಲ್ಕನೇ ವಿವಾಹವಾಗಿದ್ದಾನೆ. ದಾವಣಗೆರೆ ನಗರದ ಬೂದಳ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಾಲ್ಕನೇ ಪತ್ನಿಯೊಂದಿಗೆ ಸಂಸಾರ ಮಾಡ್ತಿದ್ದ. ನಿನ್ನೆ ಆರ್ಟಿಓ ಕಚೇರಿ ಬಳಿಯ ಬೂದಾಳ್ ರಸ್ತೆಯಲ್ಲಿ ಪತ್ನಿಯರಿಗೆ ಸಿಕ್ಕಿಬಿದ್ದಿದ್ದಾನೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. 2009ರಲ್ಲಿ ಮೊದಲನೇ ಹೆಂಡತಿ ಮದುವೆಯಾಗಿ ಕಿರುಕುಳ ನೀಡ್ತಿದ್ದನಂತೆ. ಹದಿನೈದು ತೊಲ ಒಡವೆಗಳನ್ನು ಮಾರಾಟ ಮಾಡಿದ್ದ. ಮನೆಯೊಂದನ್ನು ಸೇಲ್ ಮಾಡಿದ್ದಾನೆ. ನನ್ನನ್ನು ಮಕ್ಕಳನ್ನು ಬೀದಿಪಾಲು ಮಾಡಿದ್ದಾನೆ ಎಂದು ಮೊದಲನೇ ಹೆಂಡತಿ ಆರೋಪಿದರು.
ದಾವಣಗೆರೆ ಆಜಾದ್ ನಗರದ ಮೊಹ್ಮದ್ ವಾಸೀಂ ವಿವಿಧ ಸಂಘಟನೆಗಳನ್ನು ಮಾಡಿಕೊಂಡು ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿ, ಹಣ ಕೊಡಿಸುವುದಾಗಿ ವಂಚನೆ ಮಾಡಿದ್ದಾನೆ ಎಂದು ಪತ್ನಿಯರು ತಿಳಿಸಿದ್ದಾರೆ. ಸಂಘದಲ್ಲಿ ಹಣ ಕೊಡಿಸುವುದಾಗಿ 70ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ. ಕಮಿಷನ್ ಪಡೆದು, ಮನೆ ಲೀಜ್ ಹಾಕುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ. ಲಕ್ಷಾಂತರ ರೂಪಾಯಿ ತಮಗೆ ಕೊಡಬೇಕಿದೆ ಎಂದು ದೂರಿದರು. ಮೋಸದ ಕುರಿತಂತೆ ಈ ಹಿಂದೆಯೇ ಗಾಂಧಿನಗರ ಹಾಗೂ ಅಜಾದ್ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.



