ದಾವಣಗೆರೆ: ಎಸ್ ಎಸ್ ಮತ್ತು ಎಸ್ ಎಸ್ ಎಂ ಅಭಿಮಾನ ಬಳಗದ ಹೆಸರಲ್ಲಿ ಮತದಾರರಿಗೆ ಅಕ್ರಮವಾಗಿ ಹಂಚಲು ಸಂಗ್ರಹಿಸಿದ್ದ 16.65 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ದಕ್ಷಿಣ ವಿಭಾಗದ 107 ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು 16,65,630 ರೂ. ಮೌಲ್ಯದ ಗೃಹಬಳಕೆ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ವಸ್ತುಗಳನ್ನು ಸಂಗ್ರಹಿಸಿದ್ದ ಗೋಡನ್ ಮೇಲೆ ದಾಳಿ ಮಾಡಿ, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿದ್ದಾರೆ.
ಮಾರ್ಚ್ 19ರ ಸಂಜೆ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ನಾಲಾಬಂದ್ ರಸ್ತೆಯಲ್ಲಿನ ಕಾಂಗ್ರೆಸ್ ಮುಖಂಡ ಮಾಲತೇಶ ಜಾಧವ್ ಎಂಬುವವರಿಗೆ ಸೇರಿದ ಶೆಡ್ನಲ್ಲಿ ಅಂದಾಜು ಮೌಲ್ಯ 16,65,630 ರೂಪಾಯಿ ಮೌಲ್ಯದ ನಿರ್ಲಾನ್ ಗೆಲಾಕ್ಸಿ 353 ರಟ್ಟಿನ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಕೊಂಬೊ ಪ್ಯಾಕ್ 244 ರಟ್ಟಿನ ಬಾಕ್ಸ್ ಸೇರಿ 597 ರಟ್ಟಿನ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಕ್ಸ್ಗಳ ಮೇಲೆ ಭಾವಚಿತ್ರ; ಪ್ರತಿ ರಟ್ಟಿನ ಬಾಕ್ಸ್ನ ಮೇಲೆ 2790 ರೂಪಾಯಿ ಎಂದು ನಮೂದಿಸಲಾಗಿದ್ದು, ಎಲ್ಲಾ ಬಾಕ್ಸ್ಗಳ ಮೇಲೆ ಎಸ್.ಎಸ್. ಮತ್ತು ಎಸ್.ಎಸ್.ಎಂ. ಅಭಿಮಾನ ಬಳಗ, ಹಸ್ತದ ಗುರುತು ಇರುವ ಹಾಗೂ ಹಾಲಿ ಶಾಸಕ ಶ್ಯಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಭಾವಚಿತ್ರ ಅಂಟಿಸಿರುವುದು ಕಂಡುಬಂದಿದೆ.
ಪತ್ತೆಯಾದ ಬಾಕ್ಸ್ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಪ್ರೈಫ್ಯಾನ್, ಕ್ಯಾರೋಲ್, ವುಡ್ ಸ್ಟಿಕ್ಗಳು ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ದಾಸ್ತಾನು ಮಾಡಿದ ಶೆಡ್ಡಿನ ಮಾಲೀಕ ಮಾಲತೇಶ ಜಾಧವ್ ಎಂಬುವರು ಸ್ಥಳಕ್ಕೆ ಕರೆಸಿ, ಶೆಡ್ ಸೀಲ್ ಮಾಡಿ ಮಾಲೀಕನ ವಿರುದ್ಧ ಕಲಂ 171(ಇ) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದಾವಣಗೆರೆ ದಕ್ಷಿಣ ವಿಭಾಗದ ಮತಕ್ಷೇತ್ರದ (107) ಸಹಾಯಕ ಚುನಾವಣಾಧಿಕಾರಿ ಬಿ.ಎಂ.ಮಾನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನೀಲ್ ಕುಮಾರ, ಶಿವಾನಂದ ಡಿ. ಹಾಗೂ ಪೊಲೀಸರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.



