ದಾವಣಗೆರೆ: ಮನೆ ಬಾಗಿಲ ಮುಂದೆ ಕಟ್ಟಿದ ಎರಡು ಎಮ್ಮೆ, ಕೋಳಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹುಚ್ಚವನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬೆಂಕಿ ತಾಪಕ್ಕೆ ಎಮ್ಮೆ ಚಡಪಡಿಸಿವೆ. ಈ ಶಬ್ದ ಕೇಳಿ ಮನೆ ಬಾಗಿಲು ತೆಗೆದು ನೋಡುವಷರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೆಂಕಿಗೆ ಒಂದು ಎಮ್ಮೆ ಸಾವನ್ನಪ್ಪಿದ್ದು, ಇನ್ನೊಂದು ಎಮ್ಮೆ ತೀವ್ರ ಸುಟ್ಟ ಗಾಯದಿಂದ ನರಳುತ್ತಿದೆ. ಇದಲ್ಲದೆ ಅಲ್ಲಿಯೇ ಇದ್ದ ಪುಟ್ಟಿಯಲ್ಲಿದ್ದ ಕೋಳಿಗಳು ಸುಟ್ಟು ಹೋಗಿವೆ.
ಪ್ರಾಥಮಿಕ ಶಾಲೆಯ ಶಿಕ್ಷಕ ಹನಮಂತಪ್ಪ ಎಂಬುವವರಿಗೆ ಸೇರಿದ ಎರಡು ಎಮ್ಮೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. 85 ಸಾವಿರ ಕೊಟ್ಟು ಈ ಎಮ್ಮೆಗಳನ್ನು ಖರೀದಿ ಮಾಡಿದ್ರು. ಒಂದು ಎಮ್ಮೆ ದಿನಕ್ಕೆ 16 ಲೀಟರ್ ಹಾಲು ಕೊಡುತ್ತಿತ್ತು. ಹನಮಂತಪ್ಪನ ಮನೆಯಲ್ಲಿ ನಿತ್ಯ ಎರಡು ಎಮ್ಮೆಗಳಿಂದ 32 ಲೀಟರ್ ಹಾಲು ಮಾರಾಟ ಮಾಡುತ್ತಿದ್ದರು.
ಮೊದಲು ಎಮ್ಮೆಗಳ ಮೇಲೆ ಪೆಟ್ರೋಲ್ ಹಾಕಿದ್ದಾರೆ. ದೂರದಿಂದ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ. ನಡುರಾತ್ರಿ ಆಗಿದ್ದರಿಂದ ಜನರೆಲ್ಲಾ ನಿದ್ರೆಗೆ ಜಾರಿದ್ದರು. ಎಮ್ಮೆಗಳ ಸದ್ದು ಕೇಳಿದ ತಕ್ಷಣವೇ ಜನರು ಎದ್ದು ಹೊರ ಬಂದು ನೋಡಿದಾಗ ಒಂದು ಎಮ್ಮೆ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಇನ್ನೊಂದು ಎಮ್ಮೆ ಗಂಭೀರವಾಗಿ ಗಾಯವಾಗಿವೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಗೆ ಹನಮಂತಪ್ಪ ದೂರು ನೀಡಿದ್ದಾರೆ.



