ದಾವಣಗೆರೆ: ಮನೆ ಗಾರೆ ಕೆಲಸಕ್ಕೆ ಬಂದ ವ್ಯಕ್ತಿ, ಅದೇ ಮನೆಗೆ ಸ್ವಲ್ಪ ದಿನದ ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 2.70 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದರಾಮೇಶ್ವರ ಬಡಾವಣೆಯ ಕಲ್ಪತರು ಶಾಲೆಯ ರಸ್ತೆಯಲ್ಲಿರುವ ಶಿವಶಂಕರವರ ಮನೆಯಲ್ಲಿ ರೂಂ & ನೀರಿನ ತೊಟ್ಟಿ ಕಟ್ಟಿದ್ದಾಗಿನಿಂದ ಆಗಾಗ್ಗೆ ಕಳ್ಳತನವಾಗುತ್ತಿದ್ದು, ಆದ್ದರಿಂದ ಮನಗೆ ಸಿಸಿ ಟಿವಿ ಕ್ಯಾಮರಾವನ್ನು ಹಾಕಿದ್ದರು. ಸೆಪ್ಟಂಬರ್ 30 ರಂದು ಶಿವಶಂಕರ & ಅವರ ಹೆಂಡತಿ ಕೆಲಸಕ್ಕೆ ಹೋಗಿದ್ದು ಸಂಜೆ ವಾಪಸ್ ಬಂದು ನೋಡಿದಾಗ ಮನೆಯ ಮೇಲಿನ ರೂಂನಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ್ದು ಸಿಸಿ ಟಿವಿಯಲ್ಲಿ ಪರಿಶೀಲನೆ ಮಾಡಿದ್ದಾಗ ಗಾರೆ ಕೆಲಸ ಮಾಡಿದ ಆನಂದ ಎಂಬುವವರು ಕಳ್ಳತನ ಮಾಡಲು ಪ್ರಯತ್ನಿಸಿರುವುದು ಕಂಡು ಬಂದಿರುತ್ತದೆ. ಮನೆಯ ಬೀರುವಿನಲ್ಲಿಟ್ಟಿದ 60 ಗ್ರಾಂ ತೂಕದ ಬಂಗಾರದ ಆಭರಣಗಳು & 20,000 ನಗದು ಹಣ ಕಳ್ಳತನವಾಗಿರುತ್ತದೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ.ತಾಮ್ರಧ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಶಶಿಧರ ಯು.ಜೆ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಪ್ರಭು ಡಿ. ಕೆಳಗಿನ ಮನೆ (ಕಾ&ಸು) ಹಾಗು ಶ್ರೀಮತಿ ಮಂಜುಳಾ ಜಿ.ಎ. ತನಿಖೆ-೧ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್, ಪ್ರಕಾಶ ಟಿ, ತಿಮ್ಮಣ್ಣ ಎನ್ ಆರ್, ಎಮ್, ಮಂಜಪ್ಪ, ಶಿವರಾಜ್, ಷಣ್ಮುಖ ಕೆ, ಪುಷ್ಪಲತಾ, ಚಾಲಕ ಪ್ರಸನ್ನ ಅವರನ್ನೊಳಗೊಂಡ ತಂಡ ರಚಿಸಿದ್ದು, ಈ ತಂಡ ಆರೋಪಿತನನ್ನು ಬಂಧಿಸಿ, ಆರೋಪಿತನಿಂದ ಒಟ್ಟು 2,70 ಲಕ್ಷ ಬೆಲೆಯ ಬಂಗಾರ ಆಭರಣಗಳನ್ನು & ವಿದ್ಯಾನಗರ ಠಾಣೆಯಲ್ಲಿ ವರದಿಯಾದ ಒಂದು ರಾತ್ರಿ ಕನ್ನದ 10 ಸಾವಿರ ಬೆಲೆಯ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಶ್ಲಾಘಿಸಿದ್ದಾರೆ.



