ದಾವಣಗೆರೆ: ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಸಹಯೋಗದೊಂದಿಗೆ ದಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ನ.25ರಿಂದ 28ರ ವರೆಗೆ ನಗರದಲ್ಲಿ ರಾಷ್ಟ್ರ ಮಟ್ಟದ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ.
ಈ ಬಗ್ಗೆ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಗರದ ಪ್ರೌಢಶಾಲಾ ಮೈದಾನದಲ್ಲಿ ನಡೆಯುವ ಈ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ, ಚೆನೈ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಯ 24 ಆಹ್ವಾನಿತ ತಂಡಗಳ 360 ಜನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆಂದು ಎಂದರು.
ಟೂರ್ನಿ ವಿಜೇತರಿಗೆ ಪ್ರಥಮ ಬಹುಮಾನ 3,55,555 ರೂ. ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಬಹುಮಾನವಾಗಿ 2,55,555 ರೂ ಹಾಗೂ ಶಿವಗಂಗಾ ಕಪ್ ಮತ್ತು ತೃತೀಯ ಬಹುಮಾನವಾಗಿ 1,25,555 ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ಉತ್ತಮ ಆಲ್ ರೌಂಡರ್ಗೆ ಹೀರೋ ಹೋಂಡಾ ಬೈಕ್ ನೀಡಲಾಗುವುದು. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಕ್ರೀಡಾಪಟುಗಳಿಗಾಗಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಪಂದ್ಯಾವಳಿ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ಮೂರನೇ ತೀರ್ಪುಗಾರರ ವ್ಯವಸ್ಥೆ ಸಹ ಮಾಡಲಾಗಿದ್ದು, ಪಂದ್ಯಗಳನ್ನು ಯೂ ಟ್ಯೂಬ್ನಲ್ಲಿ ನೇರಪ್ರಸಾರ ಮಾಡಲಾಗುವುದು.
ಟೂರ್ನಿಯಲ್ಲಿ ಪೊಲೀಸ್, ಪತ್ರಕರ್ತರ, ವರ್ತಕರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸದಸ್ಯರ, ವಕೀಲರ ತಂಡಗಳ 6 ಅಫಿಶಿಯಲ್ ಕಪ್ ಪಂದ್ಯಗಳನ್ನು ಆಡಿಸಲಾಗುವುದು. ಈ ಪಂದ್ಯಾವಳಿಗೆ ಅಂದಾಜು 25ರಿಂದ 30 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ, ಸಹ ಕಾರ್ಯದರ್ಶಿ ಜಯಪ್ರಕಾಶ ಗೌಡ, ಸುರೇಶ್ ಪಾಟೀಲ್, ಚಂದ್ರು, ಆಕಾಶ್, ರಾಘವೇಂದ್ರ, ಯುವರಾಜ ಉಪಸ್ಥಿತರಿದ್ದರು.