ದಾವಣಗೆರೆ: ಲಸಿಕೆ ಪಡೆದುಕೊಳ್ಳಲು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಅಲ್ಲದೆ ಕೊವೀಡ್ ಬಂದರೂ ಜೀವಕ್ಕೆ ಅಪಾಯವಾಗುವುದಿಲ್ಲ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.
ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೊವೀಡ್ 19 ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಂದು ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಸೇರಿದಂತೆ 11800 ಜನರಿಗೆ ಬೂಸ್ಟರ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದುವರೆಗೂ ಸುಮಾರು ಜನರು 2ನೇ ಡೋಸ್ ಲಸಿಕೆಯನ್ನೆ ಪಡೆದಿಲ್ಲ. ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಯಾರು ಕೂಡ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಬಾರದು. ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಅಲ್ಲದೆ ಕೊವೀಡ್ ಬಂದರೂ ಜೀವಕ್ಕೆ ಅಪಾಯವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಸದ್ಯಕ್ಕೆ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಬೂಸ್ಟರ್ ಡೋಸ್ ಪ್ರಾರಂಭ ಮಾಡಲಾಗಿದೆ ಇನ್ನು ಒಂದು ತಿಂಗಳೊಳಗೆ ಎಲ್ಲರಿಗೂ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 16000 ಮುಂಚೂಣಿ ಕಾರ್ಯಕರ್ತರಿಗೆ ಮತ್ತು 16000 ಆರೋಗ್ಯ ಕಾರ್ಯಕರ್ತರು ಒಟ್ಟು 32000 ಜನರ ಜೊತೆಗೆ 40,000 ಜನ 60 ವರ್ಷ ಮೆಲ್ಪಟ್ಟವರನ್ನು ಒಳಗೊಂಡಂತೆ ಸುಮಾರು 72,000 ಜನರನ್ನು ಬೂಸ್ಟರ್ ಡೋಸ್ ಲಸಿಕೆಗೆ ಆಯ್ಕೆ ಮಾಡಲಾಗಿದೆ. ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ 11800 ಜನರಿಗೆ ಹಂತ ಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರು ಈ ಮುಂಚೆ ಕೋವ್ಯಾಕ್ಸಿನ್ ಪಡೆದಿದ್ದರು. ಅವರಿಗೆ ಕೋವ್ಯಾಕ್ಸಿನ್ ನೀಡಲಾಗುತ್ತದೆ. ಕೋವಿಶೀಲ್ಡ್ ಪಡೆದು 9 ತಿಂಗಳು ಪೂರ್ಣಗೊಂಡವರನ್ನು ಹುಡುಕಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದರು ಮಾಹಿತಿ ನೀಡಿದರು.
ಬೂಸ್ಟರ್ ಡೋಸ್ ಪಡೆಯುವುದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು, ಬೇಕಾಬಿಟ್ಟಿ ಓಡಾಡುವುದು, ಮೈ ಮರೆತು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ, ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು. ತಮಿಳುನಾಡು ಮತ್ತು ಬೆಂಗಳೂರಿಗೆ ಹೋಗಿ ಜಿಲ್ಲೆಗೆ ಮರಳಿದ ಸುಮಾರು 30 ಜನರನ್ನು ಗುರುತಿಸಿ ಪರೀಕ್ಷಿಸಿದಾಗ ಅವರಿಗೆ ಪಾಸಿಟಿವ್ ಲಕ್ಷಣ ಕಂಡು ಬಂದಿದೆ, ಅವರನ್ನು ಐಸೋಲೆಷನ್ನಲ್ಲಿ ಇರಿಸಲಾಗಿದೆ. ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಠಿಯಿಂದ ಪ್ರವಾಸಗಳನ್ನು ಮುಂದುಡುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಯಾವುದೇ ಓಮಿಕ್ರಾನ್ ಸೋಂಕಿತರು ದಾಖಲಾಗಿಲ್ಲ ಹಾಗೂ ಶಬರಿಮಲೆ ಯಾತ್ರೆ ಕೈಗೊಂಡು ವಾಪಾಸ್ಸು ಬಂದವರನ್ನು ನಿಗಾ ಇರಿಸಿ ಪರೀಕ್ಷಿಸಲಾಗಿದೆ. ಜೊತೆಗೆ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಾಗಾಗಿ ತಮ್ಮನ್ನು ರಕ್ಷಸಿಕೊಳ್ಳುವುದರ ಜೊತೆಗೆ ಇತರರಿಗೂ ಹರಡದಂತೆ ಜಾಗೃತಿ ವಹಿಸಬೇಕೆಂದು ಮನವಿ ಮಾಡಿದರು.ಇದೇ ವೇಳೆ ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಜಿ ಎಂಎಲ್ಸಿ ಎ.ಹೆಚ್.ಶಿವಯೋಗಿಸ್ವಾಮಿ, ಡಿ.ಹೆಚ್.ಒ ಡಾ. ನಾಗರಾಜ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ರಾಘವನ್, ಬಡಾವಣೆ ಪೊಲೀಸ್ ಠಾಣೆ ಎ.ಎಸ್.ಐ ಜಯಣ್ಣ ಹಾಗೂ ಇತರರು ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಂಡರು.ಸಂದರ್ಭದಲ್ಲಿ ಆರ್.ಸಿ.ಹೆಚ್ ಮೀನಾಕ್ಷಿ, ಪಾಲಿಕೆ ಮೇಯರ್ ಎಸ್.ಟಿ ವಿರೇಶ್, ಟಿ.ಹೆಚ್.ಒ ಡಾ. ವೆಂಕಟೇಶ್ ಇತರ ಗಣ್ಯರು ಹಾಜರಿದ್ದರು.