Connect with us

Dvgsuddi Kannada | online news portal | Kannada news online

ಕೊರೊನಾ ಹೆಚ್ಚಳ: ಮದುವೆ, ಜಾತ್ರೆ, ಧಾರ್ಮಿಕ ಸಮಾರಂಭಗಳಲ್ಲಿ ಅಧಿಕ ಜನ ಸೇರಿದ್ರೆ FIR

ದಾವಣಗೆರೆ

ಕೊರೊನಾ ಹೆಚ್ಚಳ: ಮದುವೆ, ಜಾತ್ರೆ, ಧಾರ್ಮಿಕ ಸಮಾರಂಭಗಳಲ್ಲಿ ಅಧಿಕ ಜನ ಸೇರಿದ್ರೆ FIR

ದಾವಣಗೆರೆ:  ಕೊರೊನಾ ನಿಯಂತ್ರಣ ಹಿನ್ನೆಲೆ ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದ್ರೆ  ಎಫ್‍ಐಆರ್ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಲಸಿಕಾಕರಣ ಪ್ರಗತಿ ಮತ್ತು ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೊರೊನಾ ಯುದ್ದ ಇನ್ನೂ ಮುಗಿದಿಲ್ಲ. ಜನರು ಮೈಮರೆತು, ಮದುವೆ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಸೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರೂ ಸಹಕರಿಸಬೇಕು ಎಂದರು.

ಜನರು ಪ್ರಸ್ತುತ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬದುಕುವ ರೀತಿ ನೋಡುತ್ತಿದ್ದರೆ ಎರಡನೇ ಅಲೆ ದೂರವಿಲ್ಲ ಎನ್ನಿಸುತ್ತಿದೆ. ಸರ್ಕಾರ ಕೂಡ ಈ ಹಿನ್ನೆಲೆಯಲ್ಲಿ ಮೊದಲಿನಂತೆ ಮದುವೆ, ಜಾತ್ರೆ, ಇತರೆ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಮತ್ತು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದರೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡಿದೆ. ಈ ಸುತ್ತೋಲೆಯನ್ನು ಸಂಬಂಧಿಸಿದವರಿಗೆ ನೀಡಿ ಜಾರಿ ಮಾಡಲಾಗುತ್ತಿದ್ದು, ನಿಯಮ ಮೀರಿದರೆ ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕೊರೊನಾ ನಿಯಂತ್ರಣ ತಂತ್ರಗಳು : ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೊನಾ ಪರೀಕ್ಷೆ ಸಂಖ್ಯೆ ಮತ್ತು ಲಸಿಕಾಕರಣವನ್ನು ಹೆಚ್ಚಿಸಲು ಜನರಲ್ಲಿ ಅರಿವು ಮೂಡಿಸಲು ಐಇಸಿ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜನರ ನಡವಳಿಕೆ ಹೀಗೇ ಮುಂದುವರೆದರೆ ಕೊರೊನಾ ಎರಡನೇ ಅಲೆ ದೂರ ಇಲ್ಲ. ಆದ ಕಾರಣ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಮೈಮರೆಯದೇ ಕೋವಿಡ್ ನಿಯಂತ್ರಣದಲ್ಲಿ ಜಾಗರೂಕರಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದರು.

ಕೋವಿಡ್ ನಿಯಂತ್ರಣದಲ್ಲಿ ಮೊದಲನೆಯದಾಗಿ ಕೊರೊನಾ ಟೆಸ್ಟ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲೆಗೆ ಪ್ರತಿದಿನ 2800 ಟೆಸ್ಟ್ ಗುರಿ ನೀಡಲಾಗಿದ್ದರೂ ಅಷ್ಟು ಪ್ರಗತಿ ಇಲ್ಲ. ಆದ್ದರಿಂದ ಇನ್ನು ಮುಂದೆ ನೀಡಿರುವ ಗುರಿ ಜೊತೆಗೆ 100 ಹೆಚ್ಚುವರಿ ಟೆಸ್ಟ್ ಮಾಡಬೇಕು. ದಾವಣಗೆರೆ ತಾಲ್ಲೂಕಿಗೆ 1000, ಹೊನ್ನಾಳಿ ಮತ್ತು ಹರಿಹರ ತಲಾ 375, ಜಗಳೂರು 300 ಮತ್ತು ಚನ್ನಗಿರಿ 450 ಟೆಸ್ಟ್ ಜೊತೆಗೆ ಹೆಚ್ಚುವರಿ 100 ಟೆಸ್ಟ್ ಮಾಡಬೇಕು. ಹಾಗೂ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಮಾಡಬೇಕು.

ಆರೋಗ್ಯ ಕಾರ್ಯಕರ್ತರು, ಫ್ರಂಟ್‍ಲೈನ್ ವರ್ಕರ್ಸ್ ಮತ್ತು 45 ರಿಂದ 59 ವರ್ಷದವರೆಗಿನ ಇತರೆ ಖಾಯಿಲೆಯಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟಿರುವವರು ಸೇರಿದಂತೆ ಒಟ್ಟಾರೆ ಕೋವಿಡ್ ಲಸಿಕಾಕರಣ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದ ಕಾರಣ ಜಿ.ಪಂ, ತಾ.ಪಂ,. ಗ್ರಾ ಪಂ ಅಧ್ಯಕ್ಷರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಾಯಕತ್ವದಲ್ಲಿ ಲಸಿಕಾಕರಣಕ್ಕೆ ಉತ್ತೇಜನ ನೀಡಬೇಕು. ಶಾಸಕರು ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರದ ಫ್ಲೆಕ್ಸ್ ಹಾಕಿಸಬೇಕು. ಮೂರೂ ಹಂತದವರು ಕೇವಲ ಆಧಾರ್ ಕಾರ್ಡ್‍ನೊಂದಿಗೆ ಆಸ್ಪತ್ರೆಗಳಿಗೆ ಬಂದು ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದು. ಹಾಗೂ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬ ಬಗ್ಗೆ ಸ್ಥಳೀಯ ಆಡಳಿತ, ತಹಶೀಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜನರ ಮನವೊಲಿಸಬೇಕು ಎಂದರು.

ಪ್ರತಿ ದಿನ ನಿಗದಿತ ಸಂಖ್ಯೆಯ ಕೊರೊನಾ ಟೆಸ್ಟ್ ಆಗಬೇಕು ಮತ್ತು ಇದರ ಫಲಿತಾಂಶಗಳು ಸಕಾಲದಲ್ಲಿ ಪೋರ್ಟಲ್‍ನಲ್ಲಿ ಅಪ್‍ಡೇಟ್ ಮಾಡಬೇಕೆಂದು ಸರ್ವೇಕ್ಷಣಾ ಘಟಕಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಾ ಇದ್ದೇನೆ.  ಮೂರನೇ ಹಂತದ 45 ರಿಂದ 59 ವರ್ಷದವರೆಗಿನ ಇತರೆ ಖಾಯಿಲೆಯಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟಿರುವವರ ಲಸಿಕಾಕರಣವನ್ನು ಯಶಸ್ವಿಗೊಳಿಸಲು ತಾಲ್ಲೂಕುವಾರು ಡ್ರೈವ್ ಮಾಡಬೇಕು ಹಾಗೂ ಕೊರೊನಾ ಟೆಸ್ಟ್ ಮತ್ತು ಲಸಿಕಾಕರಣದ ಯಶಸ್ಸಿಗೆ ತಹಶೀಲ್ದಾರರ ನೇತೃತ್ವದ ತಂಡ ಐಇಸಿ, ಜಾಗೃತಿ ಕಾರ್ಯಕ್ರಮಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ತಹಶೀಲ್ದಾರರು ಪ್ರತಿ ದಿನ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು. ಜೊತೆಗೆ ಜನಸಂದಣಿ ಆಗದಂತೆ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ತಹಶೀಲ್ದಾರರಿಗೆ ಡಿಸಿ ತಿಳಿಸಿದರು.

ಗ್ರಾಮ ವಾಸ್ತವ್ಯ. : ಡಿಸಿ, ಸಿಇಓ ಮತ್ತು ಎಸ್‍ಪಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಮೂರನೇ ಶನಿವಾರ ಮಾ.20 ರಂದು ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ  ನಡೆಯಲಿದೆ ಎಂದರು.  

ಎಸ್‍ಪಿ ಹನುಮಂತರಾಯ ಮಾತನಾಡಿ, ತಹಶೀಲ್ದಾರರು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಇತರೆ ಜನ ಸೇರುವ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮಾವಳಿಯನ್ನು ಪಾಲಿಸಬೇಕು. ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಸಭೆ ಕರೆದು ನಡಾವಳಿ ಸಿದ್ದಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದರು. ಹಾಗೂ ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಆಗಲೀ ನಿಯಮಾವಳಿ ಪಾಲನೆ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸದಾ ಸಿದ್ದವಾಗಿದ್ದು ನೆರವು ಪಡೆಯುವಂತೆ ತಿಳಿಸಿದರು.

ಸಿಇಓ ಮಾತನಾಡಿ, ಲಸಿಕಾಕರಣ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ, ಆಶಾ, ಪಿಡಿಓ ಸೇರಿದಂತೆ ನೌಕರರಿಗೆ ಮೈಕ್ರೋ ಪ್ಲಾನ್ ಸಿದ್ದಪಡಿಸಿ ಅದರಂತೆ ಕಾರ್ಯಾಚರಣೆ ಮಾಡಬೇಕೆಂದರು. ಐಎಲ್‍ಐ & ಎಸ್‍ಎಆರ್‍ಐ: ಜಿಲ್ಲಾಧಿಕಾರಿಗಳು ಐಎಲ್‍ಐ(ಇನ್‍ಫ್ಲ್ಯುಯೆಂಜ ಲೈಕ್ ಇಲ್‍ನೆಸ್) ಮತ್ತು ಎಸ್‍ಎಆರ್‍ಐ(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‍ಫೆಕ್ಷನ್ಸ್) ಪ್ರಕರಣಗಳಿಗೂ ಸಹ ಸ್ವಾಬ್ ಟೆಸ್ಟ್ ಮಾಡುತ್ತಿಲ್ಲ. ಶೀತ, ಕೆಮ್ಮು, ಮೈಕೈ ನೋವಿನಂತಹ ಪ್ರಕರಣಗಳಿಗೆ ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕು.

ಪಿಹೆಚ್‍ಸಿ ಮತ್ತು ಸಿಹೆಚ್‍ಸಿ ಗಳಲ್ಲಿ ನಿಗದಿತ ಟೆಸ್ಟ್ ಗುರಿ ಸಾಧಿಸಬೇಕು. ಐಎಲ್‍ಐ ಲಕ್ಷಣಗಳಿರುವವರಿಗೆ ಮೊದಲು ಸ್ವಾಬ್ ಪರೀಕ್ಷೆ ಮಾಡಿ ನಂತರ ಚಿಕಿತ್ಸೆ ನೀಡಬೇಕು. ಸರ್ಕಾರಿ ವೈದ್ಯರು ಮಾತನಾಡಿ, ಖಾಸಗಿ ಆಸ್ಪತ್ರೆಗಳಿಂದ ಐಎಲ್‍ಐ ಪ್ರಕರಣ ರೆಫರ್ ಆಗುತ್ತಿಲ್ಲವೆಂದಾಗ, ಡಿಸಿ ಪ್ರತಿಕ್ರಿಯಿಸಿ ಐಎಲ್‍ಐ ರೆಫರ್ ಮಾಡದೇ ಇರುವ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳನ್ನು ಮುಚ್ಚಿಸುತ್ತೇನೆ. ಈ ಹಿಂದಿನಂತೆಯೇ ಐಎಲ್‍ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಬೇಕು. ಈ ಎಚ್ಚರಿಕೆಯನ್ನೇ ನೋಟಿಸ್ ಎಂದು ತಿಳಿದು ಖಾಸಗಿ ಆಸ್ಪತ್ರೆಗಳು ಇಂದಿನಿಂದಲೇ ಐಎಲ್‍ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು, ಇಲ್ಲವಾದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಹೆಚ್‍ಸಿ, ಸಿಹೆಚ್‍ಸಿ, ಜನನಿಭಿಡ ಪ್ರದೇಶಗಳು, ಕಲ್ಯಾಣ ಮಂದಿರ, ಹೋಟೆಲ್‍ಗಳು, ಹಾಸ್ಟೆಲ್‍ಗಳು, ಶಾಲೆಗಳು, ಕೋಮಾರ್ಬಿಡಿಟಿ ಇರುವವರಿಗೆ ಕೋವಿಡ್ ಪರೀಕ್ಷೆ ನಡೆಸಬೇಕು. ಕಿಟ್ಸ್‍ಗಳ, ಕನ್ಸ್ಯೂಮಬಲ್ಸ್ ಮತ್ತು ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲೆಯಲ್ಲಿ ಒಟ್ಟು 92 ವೆಂಟಿಲೇಟರ್, 38 ಹೈಫ್ಲೋ ಆಕ್ಸಿಜನ್, 770 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಇದೆ ಎಂದರು.
ಡಿಹೆಚ್‍ಓ ಡಾ.ನಾಗರಾಜ್ ಮಾತನಾಡಿ, ಆರೋಗ್ಯ ಇಲಾಖೆಯೊಂದಿಗೆ ಆರ್‍ಡಿಪಿಆರ್, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಕಾರ ಹಿಂದಿನಂತೆ ಮುಂದುವರೆದರೆ ಯಶಸ್ಸು ಸಾಧ್ಯ ಎಂದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರರಾದ ಗಿರೀಶ್, ಡಾ.ನಾಗವೇಣಿ, ರಾಮಚಂದ್ರಪ್ಪ, ಬಸವನಗೌಡ, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಡಿಎಸ್‍ಓ ಡಾ.ರಾಘವನ್, ಟಿಹೆಚ್‍ಓ ಡಾ.ವೆಂಕಟೇಶ್ ಸೇರಿದಂತೆ ಎಲ್ಲ ತಾಲ್ಲೂಕುಗಳ ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top