ದಾವಣಗೆರೆ: ಮೇ. 31 ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 27222 ಕೋವಿಡ್ ಸೋಂಕು ಪತ್ತೆಯಾಗಿದ್ದು, ಈವರೆಗೆ ಒಟ್ಟಾರೆ 290 ಜನ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಈ ವರ್ಷ ಏಪ್ರಿಲ್ನಿಂದ ಈವರೆಗೆ ಕೋವಿಡ್ನ 3485 ಪ್ರಕರಣ ಪತ್ತೆಯಾಗಿದ್ದು, 26 ಮರಣ ದಾಖಲಾಗಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿಲ್ಲ. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, ಜನತಾ ಕಫ್ರ್ಯೂಗೆ ಸಾರ್ವಜನಿಕರ ಸಹಕಾರ ದೊರೆಯುತ್ತಿಲ್ಲ. ಹಳ್ಳಿಗಳಲ್ಲಿ ಇಸ್ಪೀಟ್ ಆಡಲು ಜೂಜು ಅಡ್ಡೆಗಳು ಪ್ರಾರಂಭವಾಗಿವೆ. ಜನರು ತಮ್ಮ ಸ್ವಭಾವ ಬದಲಿಸಿಕೊಳ್ಳದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳು ಏನೂ ಮಾಡಲು ಆಗಲ್ಲ. ಜನರ ಪ್ರಾಣದ ಹಿತದೃಷ್ಟಿಯಿಂದ ಕೋವಿಡ್ ಸರಪಳಿಯನ್ನು ತುಂಡರಿಸುವುದು ತೀವ್ರ ಅಗತ್ಯವಾಗಿದ್ದು, ಲಾಕ್ಡೌನ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ.
ಸೋಂಕು ಮುಚ್ಚಿಡಬೇಡಿ: ಜನರು ತಮ್ಮಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ನ ಯಾವುದೇ ರೋಗಲಕ್ಷಣಗಳು ಇದ್ದರೂ, ಪರೀಕ್ಷೆಗೆ ಒಳಗಾಗಲು ಮುಂದಾಗುತ್ತಿಲ್ಲ. ಜ್ವರ, ಕೆಮ್ಮಿಗೆ ಗುಳಿಗೆಗಳನ್ನು ನುಂಗಿ ಸುಮ್ಮನಾಗುವ ಪ್ರವೃತ್ತಿ ತೋರಿಸುತ್ತಿದ್ದಾರೆ. ಗ್ರಾಮಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇವರಿಗೂ ಸಹಕಾರ ನೀಡುತ್ತಿಲ್ಲ. ತೀವ್ರ ಉಸಿರಾಟ ತೊಂದರೆ ಪ್ರಾರಂಭವಾದಾಗ ಆಸ್ಪತ್ರೆಗೆ ಬರುತ್ತಾರೆ. ರೋಗ ತೀವ್ರ ಉಲ್ಬಣವಾದಾಗ ಆಸ್ಪತ್ರೆಗೆ ಬಂದರೆ ಅವರಿಗೆ ಚಿಕಿತ್ಸೆ ದೊರಕುವುದು ಕಷ್ಟಸಾಧ್ಯ.
ಸಾರ್ವಜನಿಕರು ರೋಗ ಮುಚ್ಚಿಡುವುದರಿಂದ ಆ ರೋಗಿಗೆ ಮಾತ್ರವಲ್ಲ ತಮ್ಮ ಕುಟುಂಬ, ಅಕ್ಕಪಕ್ಕದವರು, ಇಡೀ ಗ್ರಾಮವೇ ತೊಂದರೆಗೆ ಸಿಲುಕುತ್ತದೆ ಎಂಬ ಅಂಶವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಬೇಕು. ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಗತ್ಯವಾಗಿ ಮನೆಯಿಂದ ಹೊರಗೆ ಅಡ್ಡಾಡುವುದನ್ನು ಬಿಡಬೇಕು ಎಂದು ಸಚಿವರು, ಸಂಸದರು ಒಳಗೊಂಡಂತೆ ಎಲ್ಲ ಶಾಸಕರುಗಳು, ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.
ವಾರದೊಳಗೆ ಕೋವಿಡ್ ಇಳಿಮುಖವಾಗಬೇಕು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿದ್ದ ಜನತಾ ಕಫ್ರ್ಯೂ ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ. ಜನರು ಹಾಗೂ ವಾಹನಗಳು ನಿಗದಿತ ಅವಧಿಯ ಬಳಿಕವೂ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ತರಕಾರಿ ಮತ್ತಿತರ ಸಾಮಗ್ರಿ ಖರೀದಿ ಸ್ಥಳದಲ್ಲಿ ಈಗಲೂ ಜನಸಂದಣಿ ಕಂಡುಬರುತ್ತಿದೆ. ಹೀಗಾದಲ್ಲಿ ಕೋವಿಡ್ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗುತ್ತದೆ. ಸದ್ಯ ಜಿಲ್ಲೆಯಲ್ಲಿ 2534 ಸಕ್ರಿಯ ಪ್ರಕರಣಗಳಿವೆ. ಬರುವ ಒಂದು ವಾರದ ಒಳಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಜರುಗಿಸಲು ಮುಂದಾಗಬೇಕು. ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿ. ಯಾವುದೇ ಕಠಿಣ ಕ್ರಮಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದರು.
ಕೋವಿಡ್ ಕೇರ್ ಸೆಂಟರ್ಗೆ ಕರೆತನ್ನಿ: ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ಹಾಸ್ಟೆಲ್ ಮುಂತಾದೆಡೆ ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಕಲ್ಪಿಸಲಾಗುತ್ತಿದೆ. ರೋಗಲಕ್ಷಣ ರಹಿತ ಹಾಗೂ ಕಡಿಮೆ ತೀವ್ರತೆಯ ಕೋವಿಡ್ ಸೋಂಕಿತರಿಗೆ ಮನೆಗಳಲ್ಲಿ ಪ್ರತ್ಯೇಕವಾದ ಮೂಲಭೂತ ಸೌಕರ್ಯ ಇಲ್ಲದಿದ್ದಲ್ಲಿ, ಹೋಂ ಐಸೋಲೇಷನ್ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದೆ ಅವರನ್ನು ಆದಷ್ಟು ಕೋವಿಡ್ ಕೇರ್ ಸೆಂಟರ್ಗೆ ಕರೆತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು. ಸದ್ಯ ಜಿಲ್ಲೆಯಲ್ಲಿ 1095 ಜನ ಹೋಂ ಐಸೋಲೇಷನ್ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಉತ್ತಮ ಊಟೋಪಹಾರ, ವೈದ್ಯಕೀಯ ನೆರವು ಸೇರಿದಂತೆ ಸಮರ್ಪಕ ವ್ಯವಸ್ಥೆ ದೊರಕಿಸುವ ವಿಶ್ವಾಸವನ್ನು ಅಧಿಕಾರಿಗಳು ರೋಗಿಗಳಿಗೆ ನೀಡಬೇಕು. ಸಮರ್ಪಕ ವ್ಯವಸ್ಥೆ ಇಲ್ಲದೆ ಹೋಂ ಐಸೋಲೇಷನ್ಗೆ ಒಳಗಾಗುವವರು, ಸೋಂಕನ್ನು ವ್ಯಾಪಕವಾಗಿ ಹರಡಲು ಕಾರಣಕರ್ತರಾಗುತ್ತಾರೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.