ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣದಲ್ಲಿ ಮೊದಲನೆ ಡೋಸ್ನಲ್ಲಿ ಶೇ. 96 ರಷ್ಟು ಹಾಗೂ ಎರಡನೆ ಡೋಸ್ನಲ್ಲಿ ಶೇ. 61 ರಷ್ಟು ಸಾಧನೆಯಾಗಿದ್ದು, ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಕೋವಿಡ್ ನಿರ್ವಹಣೆಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಕೆಲವೆಡೆ ಜನರಿಂದ ಎಷ್ಟೇ ವಿರೋಧ ಬಂದರೂ, ಅಧಿಕಾರಿ, ಸಿಬ್ಬಂದಿಗಳು ಅವಮಾನ ಎದುರಿಸಿದರೂ, ದಕ್ಷತೆಯಿಂದ, ಬದ್ಧತೆಯಿಂದ, ಜನರ ಮನವೊಲಿಸಿ ಕೋವಿಡ್ ನಿರೋಧಕ ಲಸಿಕಾಕರಣವನ್ನು ಯಶಸ್ವಿಯಾಗಿಸಿದ್ದಾರೆ. ಲಸಿಕಾಕರಣದ ತಂಡದ ಉತ್ತಮ ಕಾರ್ಯವೈಖರಿ ಶ್ಲಾಘನೀಯವಾಗಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಬಾಕಿ ಉಳಿದಿರುವೆಡೆ ಎಸ್ಪಿ, ಜಿಪಂ ಸಿಇಒ ಸೇರಿದಂತೆ ನಾನೇ ಖುದ್ದಾಗಿ, ಜನರ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ರಾಜ್ಯದಲ್ಲಿ ಸದ್ಯ ಹೆಚ್ಚು ಕೇಳಿಬರುತ್ತಿರುವ ಕೋವಿಡ್ನ ಒಮಿಕ್ರಾನ್ ತಳಿಯ ಸೋಂಕು ಅತ್ಯಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಸದ್ಯ ಕೋವಿಡ್ ತಡೆಗಾಗಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು, ಒಮಿಕ್ರಾನ್ ತಳಿಯ ಕೋವಿಡ್ ಸೋಂಕು ತಡೆಗಟ್ಟಲು ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಇದುವರೆಗೂ ಮೊದಲ ಮತ್ತು ಎರಡನೆ ಡೋಸ್ ಲಸಿಕೆ ಪಡೆಯದೇ ಇರುವವರು, ಕೂಡಲೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಹೇಳಿದರು.



